ಮೂಡುಬಿದಿರೆ: ಹುಡ್ಕೊ ಕಾಲನಿಯ ಪರಿಶಿಷ್ಟ ಜಾತಿ ಮೀಸಲು ವಾರ್ಡ್ಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ ಪುರಸಭೆ ಸದಸ್ಯ ಕೊರಗಪ್ಪ, ಸಾಮಾನ್ಯ ಸಭೆಯಲ್ಲಿ ಅಂಗಿ ಕಳಚಿ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.
ನನ್ನ ವಾರ್ಡ್ನಲ್ಲಿ ಚರಂಡಿ ನಿರ್ಮಾಣಕ್ಕೆ ಮನವಿ ನೀಡಿದ್ದೆ. ವಿಷಯವೇ ಅಜೆಂಡಾದಲ್ಲಿ ಇಲ್ಲ. ಅನುದಾನವು ಬಿಡುಗಡೆಯಾಗಿಲ್ಲ. ನನ್ನ ಕ್ಷೇತ್ರವನ್ನು ಕಡೆಗಣಿಸಿದ್ದೀರಿ. ಇದನ್ನು ನಾನು ಖಂಡಿಸುತ್ತೇನೆ ಎಂದು ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದರು.
ನಾನು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಅಂದಾಜುಪಟ್ಟಿ ತಯಾರಿಸಲು ಎಂಜಿನಿಯರ್ಗೆ ಸೂಚಿಸಿದ್ದೆವು. ಪುರಸಭೆ ಸದಸ್ಯರಾಗಿ ಈ ರೀತಿ ವರ್ತಿಸಿರುವುದು ಖಂಡನಾರ್ಹ ಎಂದು ಅಧ್ಯಕ್ಷರು ಹೇಳಿದರು.
ಮಹಿಳಾ ಸದಸ್ಯರೂ ಇರುವ ಈ ಸಭೆಯಲ್ಲಿ ನೀವು ಅಂಗಿ ಬಿಚ್ಚಿದ್ದು ಸರಿ ಅಲ್ಲ ಎಂದು ಉಪಾಧ್ಯಕ್ಷೆ ಸುಜಾತಾ ಶಶಿಧರ್ ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ್ ಪೂಜಾರಿ ಸೇರಿಂತೆ ಬಿಜೆಪಿಯ ಸದಸ್ಯರು ಆಕ್ಷೇಪಿಸಿದರು. ಇಬ್ಬರ ಮಧ್ಯೆ ಸ್ವಲ್ಪ ಹೊತ್ತು ಆರೋಪ ಪ್ರತ್ಯಾರೋಪ ನಡೆಯಿತು.
ಸ್ವರಾಜ್ಯ ಮೈದಾನ ಕ್ರಿಕೆಟ್ ಆಟಕ್ಕೆ ಮೀಸಲು: ಸ್ವರಾಜ್ಯ ಮೈದಾನದಲ್ಲಿ ವಾಹನ ಪಾರ್ಕಿಂಗ್ಗೆ ಅವಕಾಶ ಕೊಟ್ಟ ಕಾರಣ ಸಾರ್ವಜನಿಕರಿಗೆ ಕ್ರಿಕೆಟ್ ಆಡಲು ಮೈದಾನ ಇಲ್ಲದಂತಾಗಿದೆ. ಇಲ್ಲಿ ಕ್ರಿಕೆಟ್ಗೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಪುರಂದರ ದೇವಾಡಿಗ ಮತ್ತು ಸುರೇಶ್ ಪ್ರಭು, ಇಕ್ಬಾಲ್ ಕರೀಂ ಪ್ರಸ್ತಾವಕ್ಕೆ ಪುರಸಭೆಯ ಬಹುತೇಕ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಈ ಬಗ್ಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆಯಲು ಪುರಸಭೆ ತೀರ್ಮಾನಿಸಿತು. ಪುರಸಭೆ ಮುಖ್ಯಾಧಿಕಾರಿ ಇಂದು, ಪರಿಸರ ಎಂಜಿನಿಯರ್ ಶಿಲ್ಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.