ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಪ್ರಯುಕ್ತ ಮಲೆಕುಡಿಯ ಸಮುದಾಯದವರ ಮುಂದಾಳತ್ವದಲ್ಲಿ ಶುಕ್ರವಾರ ಮೊಸರು ಕುಡಿಕೆ ಉತ್ಸವ ನಡೆಯಿತು.
ಪೂರ್ವ ಶಿಷ್ಟ ಸಂಪ್ರದಾಯದಂತೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಮೊಸರು ಕುಡಿಕೆ ನಡೆಸುವ ಮೂಲಕ ಈ ಬಾರಿ ಸರಳವಾಗಿ ಆಚರಿಸಲಾಯಿತು.
ಕಾಶಿಕಟ್ಟೆಯಲ್ಲಿ ಅಷ್ಟಮಿಯಂದು ಪೂಜಿತವಾದ ಕೃಷ್ಣನ ವಿಗ್ರಹವನ್ನು ಸ್ಥಳೀಯ ಮೂಲನಿವಾಸಿಗಳಾದ ಮಲೆಕುಡಿಯ ಜನಾಂಗದವರು ಪಾಲಕಿಯಲ್ಲಿ ಬಿರುದಾವಳಿ, ಮಂಗಳವಾದ್ಯದ ಮೂಲಕ ಮೆರವಣಿಗೆಯಲ್ಲಿ ದೇವಳಕ್ಕೆ ತಂದು ಅಲ್ಲಿ ವಿಶೇಷ ಪೂಜೆ ನೆರವೇರಿಸಿದರು. ದೇವಳಕ್ಕೆ ಪ್ರದಕ್ಷಿಣೆ ಬಂದು ದೇವಳದಿಂದ ಕಾಶಿಕಟ್ಟೆಗೆ ಉತ್ಸವವು ತೆರಳಿತು.
ಈ ನಡುವೆ ರಥಬೀದಿಯಿಂದ ಕಾಶಿಕಟ್ಟೆ ತನಕ ಅಲ್ಲಲ್ಲಿ ಕಂಬದಲ್ಲಿ ಕಟ್ಟಿದ್ದ ಮೊಸರು ತುಂಬಿದ ಕುಡಿಕೆಗಳನ್ನು ಮಹಿಳೆಯರು ಒಡೆದು ಜನ್ಮಾಷ್ಟಮಿಯನ್ನು ಆಚರಿಸಿದರು. ಪಲ್ಲಕ್ಕಿಯನ್ನು ಮಲೆಕುಡಿಯ ಸಮುದಾಯದವರು ಹೊತ್ತುಕೊಂಡು ಸಾಗಿದರು. ನಂತರ ಶ್ರೀಕೃಷ್ಣನಿಗೆ ಮಹಾಪೂಜೆ ನೆರವೇರಿತು.
ಪುರೋಹಿತ ಸನತ್ ನೂರಿತ್ತಾಯ ಉತ್ಸವದ ವಿದಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಳದ ನಾಗೇಶ್ ಎ.ವಿ, ಮಲೆಕುಡಿಯ ಜನಾಂಗದ ಗುರಿಕಾರ ದಿನಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.