ಬೆಳ್ತಂಗಡಿ: ನಡ ಗ್ರಾಮದ ಸುರ್ಯ ಕಾನಂಗಮನೆ ನಿವಾಸಿ, ಎಂಡೋಸಲ್ಫಾನ್ ಪೀಡಿತರಾಗಿ ಬುದ್ಧಿಮಾಂದ್ಯರಾಗಿದ್ದ ವ್ಯಕ್ತಿ ಮೃತಪಟ್ಟು ಅವರ ಅಂತ್ಯಸಂಸ್ಕಾರಕ್ಕೂ ಮುನ್ನವೇ ಅವರ ವೃದ್ಧ ತಾಯಿಯೂ ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ 7.30 ರ ವೇಳೆಗೆ ಕೃಷ್ಣ ಭಟ್ (72) ಮೃತಪಟ್ಟಿದ್ದು, ಅವರ ತಾಯಿ ಲಕ್ಷ್ಮೀ ಅಮ್ಮ (92) ಬುಧವಾರ ಬೆಳಗ್ಗಿನ ಜಾವ 4 ಗಂಟೆಗೆ ನಿಧನರಾದರು. ಕೃಷ್ಣ ಭಟ್ ಎಂಡೋಸಲ್ಫಾನ್ ಪೀಡಿತರು ಮತ್ತು ಬುದ್ಧಿಮಾಂದ್ಯರಾಗಿದ್ದರು. ಅವಿವಾಹಿತರಾಗಿದ್ದ ಅವರನ್ನು ಸಹೋದರರೇ ಸಲಹುತ್ತಿದ್ದರು. ಮಂಗಳವಾರ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಬಳಿಕ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆತರುವ ದಾರಿ ಮಧ್ಯೆಯೇ ಅಸುನೀಗಿದ್ದರು.
ನಿಯಮದಂತೆ ಅವರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ವರದಿಯಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ತಾಯಿ ಮೊದಲೇ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಮಧ್ಯಾಹ್ನ ತಾಯಿ ಮತ್ತು ಮಗನ ಅಂತ್ಯಸಂಸ್ಕಾರವನ್ನು ಉಜಿರೆಯ ಮೋಕ್ಷಧಾಮ ಸ್ಮಶಾನದಲ್ಲಿ ಜೊತೆಯಾಗಿ ನೆರವೇರಿತು.
ಮೃತ ಕೃಷ್ಣ ಭಟ್ ಅಂತ್ಯಸಂಸ್ಕಾರವನ್ನು ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ನೆರವೇರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.