ಮೂಡುಬಿದಿರೆ: ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ಸಾಹಿತಿ ಶಿವಮೊಗ್ಗದ ಡಾ. ಕುಮಾರಚಲ್ಯ ಅವರ 'ಗುಲಾಬಿ ಮತ್ತು ಪಾರಿವಾಳ' ಎಂಬ ಕವನಸಂಕಲ ಆಯ್ಕೆಯಾಗಿದೆ.
ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ನ ಪ್ರಾಯೋಜಕತ್ವದ 2018ರ ಸಾಲಿನ ಪ್ರಶಸ್ತಿಯನ್ನು ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ.ಮೊಗಸಾಲೆ ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು 68 ಹಸ್ತಪ್ರತಿಗಳು ಬಂದಿದ್ದು, ಸುಬ್ರಾಯ ಚೊಕ್ಕಾಡಿ , ಡಾ. ಬಸವರಾಜ ಕಲ್ಗುಡಿ, ಡಾ. ನೆಲ್ಲಿಕಟ್ಟೆ ಎಸ್. ಸಿದ್ಧೇಶ್ ಅವರು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ₹10 ಸಾವಿರ ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು 2019ರ ಫೆಬ್ರುವರಿ ತಿಂಗಳಲ್ಲಿ ಕಾಂತಾವರದ 'ಕನ್ನಡಭವನ'ದಲ್ಲಿ ನಡೆಯಲಿದ್ದು, ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ನೆರವೇರಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.