ADVERTISEMENT

ಕೊಲೆ ಯತ್ನ: ಮೂವರು ಅಪರಾಧಿಗಳಿಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:29 IST
Last Updated 9 ಸೆಪ್ಟೆಂಬರ್ 2022, 16:29 IST

ಮಂಗಳೂರು: ಜಾಗದ ತಕರಾರಿಗೆ ಸಂಬಂಧಿಸಿ ವ್ಯಕ್ತಿಯೊಬ್ಬರ ಕೊಲೆಯತ್ನ ನಡೆಸಿದ ಆರೋಪ ಸಾಬೀತಾಗಿದ್ದರಿಂದ ನಿಡ್ಡೋಡಿಯ ಪ್ರಸನ್ನ ಕುಮಾರ್, ಜಯಂತಿ ಸುವರ್ಣ ಮತ್ತು ರಕ್ಷಾ ಸುವರ್ಣ ಅವರಿಗೆ ನಗರದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು3 ವರ್ಷ ಸಾದಾ ಸಜೆ ಹಾಗೂ ತಲಾ ₹ 2,500 ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಪ್ರಸನ್ನ ಕುಮಾರ್‌, ಜಯಂತಿ ಹಾಗೂ ರಕ್ಷಾ ಅವರು ಮೂಡುಬಿದಿರೆ ತಾಲ್ಲೂಕು ನಿಡ್ಡೋಡಿ ಗ್ರಾಮದ ಕೊಂಟಡ್ಕದಲ್ಲಿ ವಸಂತರಾಜ ಶೆಟ್ಟಿ ಅವರ ಮನೆ ಆವರಣಕ್ಕೆ 2020ರ ಫೆ.28ರಂದು ನುಗ್ಗಿದ್ದರು. ವಸಂತ ಶೆಟ್ಟಿ ಅವರಿಗೆ ಕತ್ತಿಯಿಂದ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂಬುದಾಗಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇಬ್ಬರು ಪ್ರತ್ಯಕ್ಷ ದರ್ಶಿಗಳು ಸಾಕ್ಷ್ಯ ನುಡಿದಿದ್ದರು.

ದಂಡದ ಮೊತ್ತದಲ್ಲಿ ವಸಂತರಾಜ ಶೆಟ್ಟಿ ಅವರಿಗೆ ₹ 6 ಸಾವಿರವನ್ನು ಪರಿಹಾರವಾಗಿ ನೀಡಬೇಕು ಎಮದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲ ನಾರಾಯಣ ಶೇರಿಗಾರ್ ಯು. ಅವರು ವಾದ ಮಂಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.