ಸುರತ್ಕಲ್: ‘ತುಳುನಾಡಿನ ಪುಣ್ಯ ಮಣ್ಣಿನಲ್ಲಿ ನಾಗಾರಾಧನೆ ಅತ್ಯಂತ ಪ್ರಾಮುಖ್ಯವಾಗಿದ್ದು, ನಾಗಬನಗಳು ಆಧುನಿಕತೆಯಿಂದಾಗಿ ಅಂದಗೆಡುತ್ತಿವೆ. ಬನಗಳನ್ನು ನಾಗಗಳಿಗೆ ಅಹಿತವಾಗುವಂತೆ ನಿರ್ಮಿಸುವುದನ್ನು ನಿಲ್ಲಿಸೋಣ’ ಎಂದು ಉಪನ್ಯಾಸಕ ಎಂ.ಬಾಲಕೃಷ್ಣ ಶೆಟ್ಟಿ ಹೇಳಿದರು.
ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲದ ಅಂಗವಾಗಿ ಮಂಗಳವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೈವ, ದೇವಸ್ಥಾನಗಳಲ್ಲಿ ಭಕ್ತರು ಕೆಟ್ಟ ಚಿಂತನೆ ಇಲ್ಲದೆ ನಿಜ ಭಕ್ತಿಯಿಂದ ಅರ್ಹ ಉಡುಗೆ ತೊಟ್ಟು ಹೋಗಬೇಕು. ಅರ್ಚಕರು ನಿಸ್ವಾರ್ಥ ಭಕ್ತಿಯಿಂದ ಅರ್ಚಿಸಿದಾಗ ಅಲ್ಲಿನ ಸಾನ್ನಿಧ್ಯ ಹೆಚ್ಚುತ್ತದೆ’ ಎಂದು ಹೇಳಿದರು.
ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮಾತನಾಡಿ, ‘ದೈವ, ದೇವರ ಹೆಸರಿನಲ್ಲಿ ಉತ್ಸವ ಬ್ರಹ್ಮಕಲಶೋತ್ಸವಗಳ ಕಾರಣದಿಂದ ಗ್ರಾಮಸ್ಥರೆಲ್ಲರೂ ಸಂಘಟನೆಯಾಗುವ ಅತ್ಯುತ್ತಮ ಅವಕಾಶ ಆಗಿದೆ’ ಎಂದರು.
ಹರಿಕೃಷ್ಣ ಪುನರೂರು ಮಾತನಾಡಿ, ‘ನಾಗಗಳಿಗೆ ಬನ ನಿರ್ಮಿಸಿ ಬದಲಾಗಿ ಗುಡಿ ಕಟ್ಟಬೇಡಿ. ಗಿಡಗಳನ್ನು ನೆಟ್ಟು ಬನಗಳನ್ನು ಅಭಿವೃದ್ಧಿಪಡಿಸಬೇಕು. ದಾನಧರ್ಮ ಮಾಡಿ ಆತ್ಮಸಂತೋಷಿಗಳಾಗಬೇಕು’ ಎಂದು ಹೇಳಿದರು.
ಜೀರ್ಣೋದ್ಧಾರಕ್ಕೆ ಸಹಕರಿಸಿ ದಾನಿಗಳನ್ನು ಗೌರವಿಸಲಾಯಿತು.
ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಐಡಿಯಲ್ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಶಿಬರೂರು ಮುಕುಂದ್ ಕಾಮತ್, ಮೂಡುಬಿದಿರೆ ಶ್ರೀಪತಿ ಭಟ್, ನಾರಾಯಣ ಪಿ.ಎಂ., ಪ್ರಕಾಶ್ ಬಿ.ಎನ್., ಡಾ.ಅಣ್ಣಯ್ಯ ಕುಲಾಲ್, ವೇಣುಗೋಪಾಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು, ಪ್ರದ್ಯುಮ್ನ ರಾವ್, ಚೆನ್ನಪ್ಪ ಶೆಟ್ಟಿ, ಗಣೇಶ್ ಶೆಟ್ಟಿ, ಕಾಂತಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಭಾಗವಹಿಸಿದ್ದರು.
ಸಂತೋಷ್ ಸುವರ್ಣ ಸ್ವಾಗತಿಸಿದರು. ವಿಜೇಶ್ ಶೆಟ್ಟಿ ಸನ್ಮಾನಿತರ ವಿವರ ನೀಡಿದರು. ಅಮಿತಾ ಸುದೀಪ್ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.
ಸಾ೦ಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಗೇಶ ಬಪ್ಪನಾಡು ಅವರಿಂದ ನಾದಸ್ವರ ವಾದನ, ಕಾರ್ತಿಕ್ ರಾವ್ ಬಳಗದವರಿಂದ ಭಕ್ತಿಗೀತೆಗಳ ಗಾಯನ, ಗಣೇಶ್ ಪಾಟೀಲ್ ಅವರಿಂದ ಹರಿಕಥೆ, ಶಿಬರೂರು ಮಹಿಳಾ ಮಂಡಳಿಯವರಿಂದ ನಾಟಕ ಪ್ರದರ್ಶನಗೊಂಡಿತು.
ಧ್ವಜಾಧಿವಾಸ ಧ್ವಜಕಲಶಗಳು ನಡೆದು ಬುಧವಾರ ನಾಗದೇವರಿಗೆ ಬ್ರಹ್ಮಕಲಶಾಭಿಷೇಕ, ಧ್ವಜ ಪ್ರತಿಷ್ಠೆ, ಕಲಾಶಾಭಿಷೇಕ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.