
ಬೆಳ್ತಂಗಡಿ: ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರಾ ಮಹೋತ್ಸವ ಫೆ. 28ರಿಂದ ಮಾರ್ಚ್ 9ರವರೆಗೆ ಬ್ರಹ್ಮಶ್ರೀ ಎಡಪದವು ರಾಧಾಕೃಷ್ಣ ತಂತ್ರಿ ನೇತೃತ್ವದಲ್ಲಿ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಅವರು, 28ರಂದು ಬೆಳಿಗ್ಗೆ 9.30ಕ್ಕೆ ಕ್ಷಮಾಯಾಚನ ಪ್ರಾರ್ಥನೆ ಪೂರ್ವಕ ಮುಷ್ಟಿಕಾಣಿಕೆ ಸೇವೆ, ಸಂಜೆ 5.30ರಿಂದ ಅಘೋರ ಹೋಮ ನಡೆಯಲಿದೆ. ಸಂಜೆ 6.30ಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ವಿವಿಧ ಮಠಾಧೀಶರ ಪಾಲ್ಗೊಳ್ಳುವಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾರ್ಚ್ 1ರಿಂದ ಪ್ರತಿದಿನ ಬೆಳಿಗ್ಗೆಯಿಂದ ವಿವಿಧ ವೈದಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ ನಡೆಯಲಿವೆ. 1ರಂದು ಸಂಜೆ 3ರಿಂದ ಅರಸುಕಟ್ಟೆ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆ, 5ರಿಂದ ಸೂರ್ಯವಂದನಾ ಭಜನೋತ್ಸವ ನಡೆಯಲಿದೆ. ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಧಾರ್ಮಿಕ ಸಭೆ ಉದ್ಘಾಟಿಸುವರು. ಬಳಿಕ ಸಂಗೀತ ನೃತ್ಯ ವೈಭವ ನಡೆಯಲಿದೆ ಎಂದರು.
2ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರು ಸೋಲೂರು ಮಠ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮೈಸೂರು ರಾಮಚಂದ್ರ ರಾವ್ ಅವರಿಂದ ದಾಸರ ಹಾಡುಗಳ ಗಾಯನ ನಡೆಯಲಿದೆ. 3ರಂದು ಸಂಜೆ 6.30ರಿಂದ ಯೋಗಾಸನ ನೃತ್ಯ ನಡೆಯಲಿದೆ. ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ, ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
4ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ರಾತ್ರಿ ಟೆ 7ರಿಂದ ಭರತನಾಟ್ಯ ನೃತ್ಯವೃಕ್ಷ, ಮಹಿಷಮರ್ದಿನಿ ಮಹಿಳಾ ಮೇಳದಿಂದ ಯಕ್ಷಗಾನ ನಡೆಯಲಿದೆ. 5ರಂದು ಬೆಳಿಗ್ಗೆ 11.30ಕ್ಕೆ ಮಹಿಳಾ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಬಳಿಕ ಜಾನಪದ ನೃತ್ಯ, ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ನಡೆಯಲಿದೆ.
6ರಂದು 10.44ಕ್ಕೆ ಬ್ರಹ್ಮಕಲಶಾಭಿಷೇಕ ಪ್ರಸನ್ನ ಪೂಜೆ, ಮಧ್ಯಾಹ್ನ 2ರಿಂದ ಯಕ್ಷ ಹಾಸ್ಯ ವೈಭವ, 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡುವರು. ರಾತ್ರಿ 8ರಿಂದ ದೇವಿದಾಸ್ ಕಾಪಿಕಾಡ್ ತಂಡದಿಂದ ‘ಪುದರ್ ದೀತಿಜಿ’ ತುಳು ನಾಟಕ ನಡೆಯಲಿದೆ. 7ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡುವರು. ಸಂಜೆ 7ರಿಂದ ಮಂಗಳೂರು ಜರ್ನಿ ಥಿಯೇಟರ್ ಗ್ರೂಪ್ನಿಂದ ರಂಗ ಸಂಗೀತ, ಜನಪದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. 8ರಂದು ಬೆಳಿಗ್ಗೆ 8.30ರಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ನಾರಾವಿ, ಜನಜಾಗೃತಿ ವೇದಿಕೆ ನಾರಾವಿ, ಸೂರ್ಯನಾರಾಯಣ ದೇವಸ್ಥಾನದ ಆಶ್ರಯದಲ್ಲಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ನಡೆಯಲಿದೆ, ಭಕ್ತಿ ಸಂಗೀತ, ರಾತ್ರಿ ಎಕ್ಸೆಲ್ ವೈಭವ ಕಾರ್ಯಕ್ರಮ ನಡೆಯಲಿದೆ.
9ರಂದು ರಾತ್ರಿ 8.30ಕ್ಕೆ ಕೊಡಮಣಿತ್ತಾಯ ದೈವದ ನೇಮ, 10ರಂದು ರಾತ್ರಿ 8ರಿಂದ ಮೂಜಿಲ್ನಾಯ ಬೊಮ್ಮರ್ದಾಯ ಪಿಲ್ಚಂಡಿ ದೈವಗಳಿಗೆ ಬಲಿನೇಮ, 14ರಂದು ಏಕಾಹೋರಾತ್ರಿ ಭಜನೋತ್ಸವ ನಡೆಯಲಿದೆ ಎಂದು ತಿಳಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಪ್ರಧಾನ ಅರ್ಚಕ ಕೃಷ್ಣ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಯೋಜನಾಧಿಕಾರಿ ಅಶೋಕ್ ಬಿ, ಕಾರ್ಯಾಧ್ಯಕ್ಷ ಮಹಾವೀರ ಜೈನ್, ಜಗದೀಶ್ ಅಂಚನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಎನ್. ದಿವಾಕರ ಭಂಡಾರಿ, ಲಕ್ಷ್ಮಣ ಬಂಗೇರ, ಶಂಕರ್ ತುಂಬೆಗುಡ್ಡೆ, ಯಶೋದಾ, ರಶ್ಮಿ, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.