ಮಂಗಳೂರು: ನಗರದ ಲೇಡಿ ಹಿಲ್ನಲ್ಲಿ ನಿರ್ಮಿಸಿರುವ ಶ್ರೀ ನಾರಾಯಣಗುರು ವೃತ್ತ ಮತ್ತು ಮಂಗಳಾದೇವಿಯ ಮಂಗಳಾದೇವಿ ವೃತ್ತವನ್ನು ಸೋಮವಾರ ರಾತ್ರಿ ಉದ್ಘಾಟಿಸಲಾಯಿತು.
ದಸರಾ ಅಂಗವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಿರುವ ರಸ್ತೆಗಳ ಬೆಳಕಿನ ಹೊನಲಿನಲ್ಲಿ ವೃತ್ತಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವ ಸುನಿಲ್ ಕುಮಾರ್ ಉದ್ಘಾಟಿಸಿದರು.
ನಾರಾಯಣ ಗುರು ವೃತ್ತ ಉದ್ಘಾಟಿಸಿ ಮಾತನಾಡಿದ ಸುನಿಲ್ ಕುಮಾರ್, ನಗರದ ಸೌಂದರ್ಯೀಕರಣಕ್ಕೆ ಈಗಿನ ಆಡಳಿತ ಒತ್ತು ನೀಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಮೇಲೆ ಆಡಳಿತಕ್ಕೆ ಶ್ರದ್ಧೆ
ಮತ್ತು ಭಕ್ತಿ ಇದ್ದು ಅವಕಾಶ ಸಿಕ್ಕಿದಾಗಲೆಲ್ಲ ಅವರ ಆದರ್ಶವನ್ನು ಪಾಲಿಸಲಾಗಿದೆ. ವೃತ್ತದ ಹೆಸರಿನಲ್ಲಿ ಮಹಾಪುರುಷರ ಹೆಸರು ಶಾಶ್ವತ ಆಗಿರುತ್ತದೆ ಎಂಬುದನ್ನು ಮನಗಂಡು ಇಲ್ಲಿ ಈ ವೃತ್ತ ನಿರ್ಮಿಸಲಾಗಿದೆ. ಸರ್ಕಾರ ಮತ್ತು ಮಹಾನಗರಪಾಲಿಕೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಮುಂದುವರಿದಿದೆ ಎಂದರು.
ಶಾಸಕ ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ ಕೆ., ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯೆ ಸಂಧ್ಯಾ ಆಚಾರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಭಾಸ್ಕರ್ ಎನ್, ಸದಸ್ಯ ಜಯಾನಂದ ಚೇಳ್ಯಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಸಾಯಿರಾಮ್ ಮತ್ತಿತರರು ಇದ್ದರು.
ಸ್ವಾಗತ ಭಾಷಣ ಮಾಡಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಶಿವರಾತ್ರಿಗೆ ಮೊದಲು ಗೋಕರ್ಣನಾಥೇಶ್ವರ ಕ್ಷೇತ್ರದ ಎದುರಿನ ರಸ್ತೆಗೆ ವಿಶೇಷ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ವೃತ್ತ ನಿರ್ಮಾಣದಲ್ಲಿ ಭಾಗಿಯಾದ ಗುತ್ತಿಗೆದಾರರು, ಶಿಲ್ಪಿಗಳು ಮತ್ತಿತರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.