ADVERTISEMENT

ಮಂಗಳೂರು: ಇಕ್ಕಟ್ಟು ಪ್ರದೇಶಗಳ ರಸ್ತೆಗಳ ಬಿಕ್ಕಟ್ಟು

ಅಭಿವೃದ್ಧಿಯ ಓಟದ ನಡುವೆಯೂ ಬದಲಾವಣೆ ಮಾಡಲಾಗದೆ ಉಳಿದಿರುವ ರಸ್ತೆಗಳು; ‘ಖಾಸಗಿ’ ರಸ್ತೆಗಳ

ವಿಕ್ರಂ ಕಾಂತಿಕೆರೆ
Published 23 ಫೆಬ್ರುವರಿ 2026, 7:22 IST
Last Updated 23 ಫೆಬ್ರುವರಿ 2026, 7:22 IST
ಗಲ್ಲಿಯ ಹಾಗಿರುವ ಒಂದು ರಸ್ತೆ
ಗಲ್ಲಿಯ ಹಾಗಿರುವ ಒಂದು ರಸ್ತೆ   

ಮಂಗಳೂರು: ‘ಇದು ಖಾಸಗಿ ರಸ್ತೆ. ಅಪ್ಪಣೆ ಇಲ್ಲದೆ ಈ ರಸ್ತೆಯ ಮೂಲಕ ಸಂಚರಿಸಲು ಅವಕಾಶ ಇಲ್ಲ...’ ‘ಈ ರಸ್ತೆಯ ಮುಂದೆ ವಾಹನ ನಿಲ್ಲಿಸಬೇಡಿ...’ ಇಂಥ ಅಪ್ಪಣೆ, ನಿರ್ದೇಶನಗಳನ್ನು ಒಳಗೊಂಡ ಅಪರೂಪದ ಬರಹಗಳು ಕಾಣಸಿಗುವುದು ನಗರ ಮಧ್ಯದ ದೇರೇಬೈಲ್ ನೈರುತ್ಯ ವಾರ್ಡ್‌ನಲ್ಲಿ. 

ಒಳಾಂಗಣ ಕ್ರೀಡಾಂಗಣ, ಬೃಹತ್ ಮಳಿಗೆಗಳು, ಶಿಕ್ಷಣ ಸಂಸ್ಥೆಗಳು, ದೊಡ್ಡ ದೊಡ್ಡ ಕಂಪನಿಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಆಡಳಿತ ಸಂಸ್ಥೆಗಳನ್ನು ಒಳಗೊಂಡಿರುವ ವಾರ್ಡ್‌ನಲ್ಲಿ ಹೀಗೆ ಬೋರ್ಡ್ ಹಾಕಿಕೊಂಡು ಮನೆಯಲ್ಲಿ ವಾಸಮಾಡಬೇಕಾದ ಪರಿಸ್ಥಿತಿಗೆ ಕಾರಣ ಕಿರಿದಾದ ರಸ್ತೆಗಳು ಮತ್ತು ಕಿಷ್ಕಿಂದೆಯಂಥ ಪ್ರದೇಶಗಳು. 

ಉರ್ವ ಮಾರುಕಟ್ಟೆ, ಮೂಡ, ಹಳೆಯ ಇನ್ಫೊಸಿಸ್‌, ಲೇಡಿ ಹಿಲ್, ಉರ್ವ ಒಳಾಂಗಣ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾ ಸಂಕೀರ್ಣ, ದೇವಸ್ಥಾನಗಳು, ದೈವಸ್ಥಾನಗಳು ಮಂದಿರಗಳನ್ನು ಒಳಗೊಂಡ ವಿಸ್ತಾರವಾದ ಪ್ರದೇಶದ ಹಲವು ಒಳರಸ್ತೆಗಳನ್ನು ಅಭಿವೃದ್ಧಿಪಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅವುಗಳು ಹಾಗೆಯೇ ಉಳಿದಿವೆ. 

ADVERTISEMENT

ಖಾಸಗಿ ರಸ್ತೆ ಎಂಬ ಬೋರ್ಡ್ ಅಳವಡಿಸಿರುವ, ಸುಮಾರು 15 ಅಡಿ ಅಗಲದ ರಸ್ತೆಯ ಮೂಲಕ ಒಳಗೆ ಹೋದರೆ 200 ಮೀಟರ್‌ ದೂರದಲ್ಲಿ ‘ಡೆಡ್‌ ಎಂಡ್‌’ ಇದೆ. ಅಲ್ಲಿ ಮನೆ ಹಾಗೂ ವಿಶಾಲವಾದ ಜಾಗ ಇದೆ. ಹೋಗುವ ದಾರಿಯ ಇಕ್ಕೆಲಗಳಲ್ಲಿ ಮನೆಗಳು, ವಸತಿ ಸಂಕೀರ್ಣಗಳು, ಹಳೆಯ ಶೈಲಿಯ ಪಾರಂಪರಿಕ ಮನೆಗಳು ಇವೆ. ಹೋದ ದಾರಿಯಲ್ಲೇ ವಾಪಸ್ ಬರಬೇಕಾಗಿರುವುದರಿಂದ, ಮತ್ತೊಂದು ರಸ್ತೆಗೆ ಸಂಪರ್ಕ ಇಲ್ಲದೇ ಇರುವುದರಿಂದ ಇಲ್ಲಿ ‘ಖಾಸಗಿ’ ಎಂಬ ಫಲಕ ಅಳವಡಿಸುವುದು ಅನಿವಾರ್ಯ ಆಗಿದೆ. 

ಬಡಾವಣೆಯ ಹಲವು ರಸ್ತೆಗಳು ಇದೇ ರೀತಿ ‘ಡೆಡ್‌ ಎಂಡ್‌’ಗಳು. ಕೆಲವು ರಸ್ತೆಗಳು ಒಂದೇ ಮನೆಗಿರುವ ದಾರಿ. ಅದು ಕೂಡ ಏಕೈಕ ದಾರಿ. ಈ ಕಾರಣದಿಂದ ಮುಖ್ಯರಸ್ತೆಗೆ ಈ ರಸ್ತೆ ಸೇರುವಲ್ಲಿ ವಾಹನ ನಿಲ್ಲಿಡಬೇಡಿ ಎಂಬ ಒಕ್ಕಣೆ ಇದೆ. ಯಾಕೆಂದರೆ, ಅಲ್ಲಿ ವಾಹನಗಳನ್ನು ನಿಲ್ಲಿಸಿದರೆ ಹೊರಗಿನ ವಾಹನಗಳು ಆ ರಸ್ತೆಯ ಮೂಲಕ ಒಳಗೆ ಹೋಗುವಂತಿಲ್ಲ. ಒಳಗಿದ್ದರೆ ಹೊರಗೆ ಬರುವಂತಿಲ್ಲ. 

‘ಬೋರ್ಡ್ ಇದ್ದರೂ ಕೆಲವರು ಇಲ್ಲಿ ವಾಹನ ನಿಲ್ಲಿಸುವುದುಂಟು. ಅವರನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ ಅವರು ನಿಲ್ಲಿಸುವುದು ರಸ್ತೆಬದಿಯಲ್ಲಿ. ಒಳಗಿರುವ ಮನೆಗೆ ಕಡಿದಾದ ಇದೊಂದೇ ದಾರಿ ಇರುವುದು ಎಂದು ಅವರಿಗೆಲ್ಲಿ ಗೊತ್ತು... ಹಾಗೆ ರಸ್ತೆಬದಿಯಲ್ಲಿ ವಾಹನ ನಿಲ್ಲಿಸಿದರೆ ಕೆಲವೊಮ್ಮೆ ಆ ಮನೆಯವರು ಪಡುವ ಪಾಡು ಅನೇಕ ಬಾರಿ ಕಂಡಿದ್ದೇನೆ’ ಎಂದು ಸಮೀಪದ ಅಂಗಡಿಯೊಂದರ ಮಾಲೀಕರು ಹೇಳಿದರು. 

ವಾರ್ಡಿನ ಈ ಪರಿಸ್ಥಿತಿಯ ಬಗ್ಗೆ ಅಸಹಾಯಕ ಸ್ಥಿತಿಯನ್ನು ಪಾಲಿಕೆಯ ನಿಕಟಪೂರ್ವ ಸದಸ್ಯ ಗಣೇಶ್ ಕುಲಾಲ್ ಅವರೂ ಒಪ್ಪಿಕೊಳ್ಳುತ್ತಾರೆ. ‘ವಾರ್ಡ್‌ನಲ್ಲಿ ಅನೇಕ ಅಭವೃದ್ಧಿ ಕೆಲಸಗಳು ಆಗಿವೆ. ಆದರೆ ಇಕ್ಕಟ್ಟಾದ ರಸ್ತೆಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇಲ್ಲಿಯದು. ಆದರೂ ಸಮಸ್ಯೆ ಪರಿಹಾರಕ್ಕೆ ಏನಾದರೂ ದಾರಿ ಇದೆಯೇ ಎಂಬುದರ ಬಗ್ಗೆ ಚಿಂತನೆ ನಿರಂತರವಾಗಿ ನಡೆಯುತ್ತಿದೆ’ ಎಂದು ಗಣೇಶ್ ತಿಳಿಸಿದರು.    

₹ 20 ಕೋಟಿ ಕಾಮಗಾರಿ

ವಾರ್ಡ್‌ನಲ್ಲಿ ತಮ್ಮ ಅವಧಿಯಲ್ಲಿ ₹ 20 ಕೋಟಿ ಮೊತ್ತದ ಕಾಮಗಾರಿಯನ್ನು ನಡೆಸಲಾಗಿದ್ದು ಪ್ರದೇಶದ ಚಿತ್ರಣವೇ ಬದಲಾಗಿದೆ ಎಂದು ಪಾಲಿಕೆಯ ನಿಕಟಪೂರ್ವ ಸದಸ್ಯ ಗಣೇಶ್ ಕುಲಾಲ್ ತಿಳಿಸಿದರು.  ‘ಒಳಚರಂಡಿ ಮತ್ತು ರಸ್ತೆಯ ಸಮಸ್ಯೆ ಗಂಭೀರವಾಗಿತ್ತು. ಅದರ ಕಡೆಗೆ ಹೆಚ್ಚು ಗಮನ ನೀಡಲಾಗಿದೆ. ಈಗ ಎಲ್ಲೂ ಕೊಳಚೆ ನೀರು ನಿಲ್ಲುವ ಪರಿಸ್ಥಿತಿ ಇಲ್ಲ. ಉರ್ವ ವೃತ್ತವನ್ನು ಅಭಿವೃದ್ಧಿಪಡಿಸಿದ್ದು ಆ ಪ್ರದೇಶ ಸುಂದರವಾಗಿ ಕಂಗೊಳಿಸುತ್ತಿದೆ. ಹಲವಾರು ದೈವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ. ಒಳರಸ್ತೆಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕಾಗಿದೆ. ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸುವ ಕೆಲಸವೂ ಆಗಬೇಕಿದೆ. ಅಧಿಕಾರ ಅವಧಿ ಮುಗಿದಿದ್ದರೂ ಜನರ ಪ್ರತಿನಿಧಿಯಾಗಿ ನಗರಪಾಲಿಕೆಗೆ ನಿರಂತರವಾಗಿ ಹೋಗಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ನೆನಪಿಸುತ್ತಿದ್ದೇನೆ’ ಎಂದು ಅವರು ಹೇಳಿದರು.  

ಕುಸಿಯುತ್ತಿರುವ ಕಾಂಕ್ರಿಟ್‌

ಅಭಿವೃದ್ಧಿ ಕಾಮಗಾರಿಗಳ ಭಾಗವಾಗಿ ಲೇಡಿ ಹಿಲ್‌ನಿಂದ ಉರ್ವ ಮಾರುಕಟ್ಟೆ ಕಟೆಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಂಕ್ರಿಟ್ ಹಾಸಿ ಅದರ ಮೇಲೆ ಇಂಟರ್ ಲಾಕ್ ಅಳವಡಿಸಲಾಗಿದೆ. ಆದರೆ ಕೆಲವು ಭಾಗಗಳಲ್ಲಿ ಇಂಟರ್ ಲಾಕ್ ಎದ್ದು ಅಸ್ತವ್ಯಸ್ತವಾಗಿ ರಸ್ತೆಯ ಬದಿ ಕುಸಿಯುತ್ತಿದೆ. ಇದರಿಂದ ವಾಹನಗಳನ್ನು ನಿಲ್ಲಿಸಲು ಮತ್ತು ನಡೆದಾಡಲು ಎಂದು ನಾಗರಿಕರು ಆರೋಪಿಸುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.