ಎನ್ಎಚ್ಆರ್ಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯುವರಾಜ್, ಡಿವೈಎಸ್ಪಿ ರವಿ ಸಿಂಗ್ ಅವರನ್ನೊಳಗೊಂಡ ತಂಡ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಎಸ್ಐಟಿ ಶೋಧ ನಡೆಸಿರುವ ಸ್ಥಳವನ್ನು ಪರಿಶೀಲಿಸಿತು.
ಚಿತ್ರ: ಫಕ್ರುದ್ದೀನ್ ಎಚ್
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಕುರಿತು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿರುವಂತೆಯೇ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ತಂಡವು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದೆ.
ಎನ್ಎಚ್ಆರ್ಸಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಯುವರಾಜ್, ಡಿವೈಎಸ್ಪಿ ರವಿ ಸಿಂಗ್ ಮತ್ತಿತರರನ್ನು ಒಳಗೊಂಡ ನಾಲ್ವರ ತಂಡ ಸೋಮವಾರ ಬೆಳ್ತಂಗಡಿ ಯಲ್ಲಿರುವ ಎಸ್ಐಟಿ ಕಚೇರಿ, ಧರ್ಮಸ್ಥಳ ಗ್ರಾಮ ಪಂಚಾಯಿತಿ ಕಚೇರಿ, ಧರ್ಮಸ್ಥಳ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು. ಸಾಕ್ಷಿ ದೂರುದಾರನಿಂದಲೂ ಹೇಳಿಕೆ ಪಡೆದುಕೊಂಡಿದೆ ಎಂದು ಗೊತ್ತಾಗಿದೆ.
ಧರ್ಮಸ್ಥಳದಲ್ಲಿ ಈಚಿನ ದಶಕಗಳಲ್ಲಿ ಮೃತದೇಹ ಪತ್ತೆಗೆ ಸಂಬಂಧಿಸಿ ಅಸಹಜ ಸಾವು ಪ್ರಕರಣಗಳು ಎಷ್ಟು ದಾಖಲಾಗಿವೆ ಎಂಬ ಮಾಹಿತಿಯನ್ನು ಎನ್ಎಚ್ಆರ್ಸಿ ತಂಡದ ಮುಖ್ಯಸ್ಥ, ಐಪಿಎಸ್ ಅಧಿಕಾರಿ ಯುವರಾಜ್ ಅವರು ಧರ್ಮಸ್ಥಳ ಠಾಣೆಯಿಂದ ಪಡೆದುಕೊಂಡರು.
ಎನ್ಎಚ್ಆರ್ಸಿಯ ಕೆಲವು ಅಧಿಕಾರಿಗಳು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ, ಗ್ರಾಮದಲ್ಲಿ ಈಚಿನ ದಶಕಗಳಲ್ಲಿ ಸಿಕ್ಕಿದ್ದ,ಗುರುತು ಪತ್ತೆಯಾಗದ ಶವಗಳನ್ನು ವಿಲೇ ಮಾಡಿದ ಕುರಿತ ವಿವರ ಪಡೆದರು.
‘ಈಚಿನ ದಶಕಗಳಲ್ಲಿ ಮೃತದೇಹಗಳ ವಿಲೇವಾರಿಗೆ ಎಷ್ಟು ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ, ಅವರಲ್ಲಿ ಯಾರಾದರೂ ಈಗಲೂ ಕಾರ್ಯ ನಿರ್ವಹಿಸುತ್ತಿರುವರೇ‘ ಎಂದು ಮಾಹಿತಿ ಪಡೆದರು. ಮೃತದೇಹಗಳ ವಿಲೇವಾರಿ ಮಾಡಿದ್ದ ಕಾರ್ಮಿಕರು ಗ್ರಾಮದಲ್ಲೇ ವಾಸವಾಗಿದ್ದು, ಅವರ ಮನೆಗಳಿಗೂ ತೆರಳಿ ಹೇಳಿಕೆ ದಾಖಲಿಸಿಕೊಂಡರು. ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತಾ ಕಾರ್ಮಿಕನಾಗಿರುವ ವ್ಯಕ್ತಿಯೊಬ್ಬರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದರು.
ವಿಶೇಷ ತನಿಖಾ ತಂಡದವರು ಧರ್ಮಸ್ಥಳದ ಬಾಹುಬಲಿ ಬೆಟ್ಟಕ್ಕೆ ತೆರಳುವ ದಾರಿ ಬದಿಯಲ್ಲಿ ಶನಿವಾರ ಶೋಧಕಾರ್ಯ ನಡೆಸಿದ್ದ ಸ್ಥಳಕ್ಕೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಾಕ್ಷಿ ದೂರುದಾರ ನೇತ್ರಾವತಿ ಸ್ನಾನಘಟ್ಟದ ಬಳಿ ತೋರಿಸಿರುವ 13ನೇ ಸ್ಥಳದಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (ಜಿಪಿಆರ್) ಸಾಧನದ ನೆರವಿನಿಂದ ಶೋಧ ಕಾರ್ಯ ಮುಂದುವರಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ಸಿದ್ಧತೆ ನಡೆಸಿದೆ.
‘ಜಿಪಿಆರ್ ಸಾಧನ ತರಿಸಿಕೊಂಡಿದ್ದೇವೆ. ಅದನ್ನು ಬಳಸಿ ಶವ ಹೂತಿರುವ ಕುರುಹುಗಳು ಇವೆಯೇ ಎಂದು ಪರಿಶೀಲಿಸುತ್ತೇವೆ. ಅವಶೇಷ ಇರುವುದು ಖಚಿತವಾದರೆ ಮಾತ್ರ ಅಗೆಯುತ್ತೇವೆ’ ಎಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಮೂಲಗಳು ತಿಳಿಸಿವೆ. ಸಾಕ್ಷಿ ದೂರುದಾರ ತೋರಿಸಿದ್ದ ಜಾಗದಲ್ಲಿದ್ದ ಕಳೆ ಸ್ವಚ್ಛಗೊಳಿಸಿ, ಡ್ರೋನ್ ಮೂಲಕ ಜಾಗದ ಜಿಪಿಎಸ್ ಲೊಕೇಷನ್ ವಿವರಗಳನ್ನು ಸೋಮವಾರ ದಾಖಲಿಸಲಾಯಿತು.
ಬೆಳ್ತಂಗಡಿ: ‘ಪತ್ತೆಯಾಗದ ಪ್ರಕರಣ ಎಂದು 39 ವರ್ಷದ ಹಿಂದೆ ಮುಚ್ಚಿ ಹಾಕಿರುವ ಪ್ರಕರಣದ ಮರು ತನಿಖೆ ನಡೆಸಿ, ನ್ಯಾಯ ಒದಗಿಸಬೇಕು’ ಎಂದು ಪದ್ಮಲತಾ ಎಂಬವರ ಅಕ್ಕ ಇಂದ್ರಾವತಿ ಬೆಳ್ತಂಗಡಿಯಲ್ಲಿ ಎಸ್ಐಟಿ ಕಚೇರಿಗೆ ದೂರು ನೀಡಿದ್ದಾರೆ.
ಈ ವೇಳೆ ಅವರು, ‘1986ರ ಡಿ. 22ರಂದು ಅಪಹರಣಕ್ಕೊಳಗಾದ ಪದ್ಮಲತಾಳ ಮೃತದೇಹ 1987ರ ಫೆ. 17ರಂದು ನೆರಿಯ ಹೊಳೆಯ ಬದಿಯಲ್ಲಿ ಸಿಕ್ಕಿತ್ತು. ಈ ಕುರಿತು ನ್ಯಾಯ ಸಿಗಲಿಲ್ಲ. ಮರು ತನಿಖೆ ಕೋರಿ ದೂರು ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.