ADVERTISEMENT

ನವರಾತ್ರಿ: ದೇವಸ್ಥಾನಗಳ ಬಳಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 14:49 IST
Last Updated 2 ಅಕ್ಟೋಬರ್ 2022, 14:49 IST
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಬಳಿ ಭಾನುವಾರ ಕಂಡು ಬಂದ ಜನಜಂಗುಳಿ
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಬಳಿ ಭಾನುವಾರ ಕಂಡು ಬಂದ ಜನಜಂಗುಳಿ   

ಮಂಗಳೂರು: ನವರಾತ್ರಿ ಪ್ರಯುಕ್ತ ನಗರದ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಾನುವಾರ ರಜಾದಿನವಾಗಿದ್ದರಿಂದ ಮಂಗಳಾದೇವಿ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಭಗವತಿ ದೇವಸ್ಥಾನ, ಉರ್ವ ಮಾರಿಗುಡಿ ಹಾಗೂ ಇತರ ಶಕ್ತಿ ದೇವತೆಗಳ ಆರಾಧನಾ ಸ್ಥಳಗಳಲ್ಲಿ ಭಾರಿ ಜನಜಂಗುಳಿ ಕಂಡುಬಂತು.

ಕುದ್ರೋಳಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶಾರದೆ, ಆದಿಶಕ್ತಿ, ಗಣಪತಿ ಹಾಗೂ ನವದುರ್ಗೆಯರ ಮೂರ್ತಿಗಳ ವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದರು. ನವರಾತ್ರಿ ಸಲುವಾಗಿ ಭಕ್ತರು ಭಾರಿ ಸಂಖ್ಯೆಯಲ್ಲಿ ಭೇಟಿ ನೀಡಿದ್ದರಿಂದ ಕೆಲ ದೇವಸ್ಥಾನಗಳ ಆಸುಪಾಸಿನ ರಸ್ತೆಗಳಲ್ಲಿ ವಾಹನ ಸಂಚಾರದಟ್ಟಣೆ ಉಂಟಾಯಿತು. ಇದನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‌ ಕುಮಾರ್‌ ಅವರು ಕುಟುಂಬ ಸಮೇತ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ADVERTISEMENT

ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು.

ಮಾರುವೇಷದಲ್ಲಿ ಸರ ಕಳ್ಳರು: ಕುದ್ರೋಳಿ ಪರಿಸರದಲ್ಲಿ ಪುರುಷನೊಬ್ಬ ಬುರ್ಖಾ ಧರಿಸಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲೂ ಸೆರೆಯಾಗಿದೆ. ‘ಜನಜಂಗುಳಿಯಲ್ಲಿ ಕೆಲವು ಸರಕಳ್ಳರು ಈ ರೀತಿ ಬುರ್ಕಾ ಧರಿಸಿ ಓಡಾಡುತ್ತಿರುವ ಸಾಧ್ಯತೆ ಇದೆ. ಹಾಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು, ತಾವು ಧರಿಸಿದ ಆಭರಣಗಳ ಬಗ್ಗೆ ಎಚ್ಚರ ವಹಿಸಬೇಕು’ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.