ಮಂಗಳೂರು: ಕೊಂಪದವು ಗ್ರಾಮದ ಸೋಮೇಶ್ವರ ಗುಹಾಲಯ ನೆಲ್ಲಿತೀರ್ಥದಲ್ಲಿ ಗುಹಾಪ್ರವೇಶ, ತೀರ್ಥಸ್ನಾನಕ್ಕೆ ಇದೇ 17ರಂದು ಚಾಲನೆ ದೊರೆಯಲಿದ್ದು, ಬರುವ ವರ್ಷದ ಏಪ್ರಿಲ್ 14ರ ವರೆಗೆ ಜರುಗಲಿದೆ.
ನೆಲ್ಲಿತೀರ್ಥಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಮತ್ತು ಈ ಪರಿಸರದಲ್ಲಿರುವ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಇದು ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದ್ದು, ಸಿ ಗ್ರೇಡ್ ದೇವಾಲಯವಾಗಿದೆ. ಇಲ್ಲಿ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಈ ಕ್ಷೇತ್ರವನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ಈ ಪರಿಸರದಲ್ಲಿರುವ ಕೆರೆಯ ಅಭಿವೃದ್ಧಿಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಚಿವರಾಗಿದ್ದಾಗ ₹32 ಲಕ್ಷ ಅನುದಾನಕ್ಕೆ ಒಪ್ಪಿಗೆ ನೀಡಿದ್ದರು. ಅಷ್ಟರಲ್ಲಿ ಸರ್ಕಾರ ಬದಲಾಯಿತು. ಈ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಶೀಘ್ರ ಒಪ್ಪಿಗೆ ನೀಡಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ.
ಮುಂದಿನ ವರ್ಷ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದರ ಅಂಗವಾಗಿ ಭಕ್ತರಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಈಗಾಗಲೇ ಪ್ರಾರಂಭವಾಗಿವೆ. ಇದಕ್ಕೆ ಭಕ್ತರೂ ಕೈಜೋಡಿಸಬೇಕು. ಹೆಚ್ಚಿನ ಮಾಹಿತಿಗೆ ದೂ:0824–2299142, 8088708914 ಸಂಪರ್ಕಿಸುವಂತೆ ಕೋರಲಾಗಿದೆ.
17ರಂದು ಚಾಲನೆ: ನೆಲ್ಲಿತೀರ್ಥದಲ್ಲಿ ಗುಹಾಪ್ರವೇಶ, ತೀರ್ಥಸ್ನಾನ ಇದೇ 17ರಂದು ಬೆಳಿಗ್ಗೆ 9ಕ್ಕೆ ಕಾಸರಗೋಡಿನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಆರಂಭವಾಗಲಿದೆ.
ಮಧ್ಯಾಹ್ನ ಸಾಮೂಹಿಕ ಶನಿಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ಭುನಾಭಿರಾಮ ಉಡುಪ, ಮೂಡುಬಿದಿರೆಯ ಶ್ರೀಪತಿ ಭಟ್, ರಾಜಗೋಪಾಲ ಆಚಾರ್ಯ ಕೋಟೇಶ್ವರ ಭಾಗವಹಿಸುವರು.
ಏಪ್ರಿಲ್ವರೆಗೆ ಪ್ರತಿದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೆ ಗುಹಾಪ್ರವೇಶ, ತೀರ್ಥಸ್ನಾನ ಇರುವುದು. ಗುಹಾತೀರ್ಥ ಸ್ನಾನ ಮಾಡುವವರು ಪ್ರತ್ಯೇಕ ಒಂದು ಜೊತೆ ಬಟ್ಟೆ, ಪುರುಷರು ಬೈರಾಸು ಅಥವಾ ಲುಂಗಿ, ಮಹಿಳೆಯರು ಚೂಡಿದಾರ್ ಅಥವಾ ಸೀರೆ ತರುವುದು ಉತ್ತಮ. ಕಚೇರಿಯಲ್ಲಿ ರಶೀದಿ ಪಡೆದು ಕೆರೆಯಲ್ಲಿ ಸ್ನಾನ ಮಾಡಿ ಬರುವುದು ಕಡ್ಡಾಯ. ಗುಹಾಪ್ರವೇಶಕ್ಕೆ ಎಲ್ಲಾ ಜಾತಿ, ಧರ್ಮದವರಿಗೂ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.