
ಮಂಗಳೂರು: ದೈಹಿಕ ಸಮಸ್ಯೆಯಿಂದ ಬಳಲುತ್ತಿರುವವವರು, ಡಯಾಲಿಸಿಸ್ನಂತಹ ನಿರಂತರ ಚಿಕಿತ್ಸೆಯ ಅನಿವಾರ್ಯ ಹೊಂದಿರುವವರು, ಶಿಕ್ಷಣಕ್ಕೆ ಹಣಕಾಸಿನ ಮುಗ್ಗಟ್ಟು ಎದುರಿಸುವವರು, ಒಂಟಿ ಪೋಷಕರ ಮಕ್ಕಳು, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದ ಸಾಧಕರು.... ಮುಂತಾದ ಸಾವಿರಾರು ಮಂದಿಗೆ ಎಂಆರ್ಜಿ ಗ್ರೂಪ್ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆ ‘ನೆರವು’ ಅಡಿಯಲ್ಲಿ ಗುರುವಾರ ಧನ ಸಹಾಯ ಮಾಡಲಾಯಿತು.
ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಫಲಾನುಭವಿಗಳ ಜೊತೆಗೆ ಅಕ್ಕ ಪಕ್ಕದ ಜಿಲ್ಲೆಗಳು ಹಾಗೂ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಕೊಪ್ಪ, ಸಕಲೇಶಪುರ ಮುಂತಾದ ಕಡೆಯವರಿಗೂ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು. ನೂಕು ನುಗ್ಗಲು ತಡೆಯಲು ಪ್ರತಿ ವಿಭಾಗಕ್ಕೂ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿತ್ತು. ಫಲಾನುಭವಿಗಳು ಕಾರ್ಯಕ್ರಮಕ್ಕೆ ಕರೆತರುವ ಹಾಗೂ ಊರಿಗೆ ಬಿಟ್ಟುಬರುವುದಕ್ಕೂ ಆಯೋಜಕರು ವಾಹನ ವ್ಯವಸ್ಥೆ ಕಲ್ಪಿಸಿದ್ದರು.
ಅತಿಥಿಯಾಗಿದ್ದ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್, 'ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಪ್ರತಿಬಿಂಬದಂತಿರುವ ‘ಸಹಾಯ ಹಸ್ತ’ ಕಾರ್ಯಕ್ರಮ ಸಮಾಜಕ್ಕೆ ಮಾದರಿ.ಯುವ ಪೀಳಿಗೆಗೆ ಮಾನವೀಯ ಮೌಲ್ಯವನ್ನು ವರ್ಗಾಯಿಸುವ ಕಾರ್ಯಕ್ರಮವಿದು. ಜನರ ನೋವಿಗೆ ಸ್ಪಂದಿಸುವ ಹೃದಯ ಇದರ ಹಿಂದೆ ಇದೆ’ ಎಂದರು.
ಎಂಆರ್ಜಿ ಗ್ರೂಪ್ನ ಮುಖ್ಯಸ್ಥ ಕೆ.ಪ್ರಕಾಶ್ ಶೆಟ್ಟಿ, 'ನಾನೊಬ್ಬ ಹಳ್ಳಿಯ ಸಾಮಾನ್ಯ ಕುಟುಂಬದಿಂದ ಬಂದವ. ಶಾಲೆಗೆ ಹೋಗುವಾಗ ಜಾತಿ ಧರ್ಮ, ಪಂಗಡ ಮೀರಿ ಎಲ್ಲರ ಮನೆಯಲ್ಲಿ ತಿಂದುಂಡು ಬೆಳೆದೆ. ಸ್ನೇಹಿತರ ಜೊತೆ ಆಡಿದ ನೆನಪುಗಳನ್ನು ಇನ್ನೂ ಹಸಿರಾಗಿ ಉಳಿಸಿಕೊಂಡವ. ಅಮ್ಮನ ಮಮತೆ, ತಂದೆಯ ಪ್ರೀತಿ, ತುಳು ನಾಡಿನ ಸಂಸ್ಕಾರದಿಂದಾಗಿ ಈ ಹಂತಕ್ಕೆ ಬೆಳೆದಿದ್ದೇನೆ. ಇಂದು ಫಲಾನುಭವಿಗಳಿರುವ ಸಾಲಿನಲ್ಲಿ ಒಂದು ಕಾಲದಲ್ಲಿ ನಾನೂ ಇದ್ದೆ. ಕಷ್ಟದ ಪರಿಜ್ಞಾನ ಇರುವುದರಿಂದಲೇ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈ ವರ್ಷ 4500 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಶೇ 90ರಷ್ಟು ಅರ್ಜಿಗಳಿಗೆ ಧನ ಸಹಾಯ ಒದಗಿಸಿದ್ದೇವೆ. ಗಡುವು ಮೀರಿದ ಬಳಿಕ ಬಂದ 1 ಸಾವಿರ ಅರ್ಜಿಗಳಿಗೂ ನೆರವು ನೀಡಲು ಯತ್ನಿಸುತ್ತೇವೆ’ ಎಂದರು.
ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಆಶಾ ಪ್ರಕಾಶ ಶೆಟ್ಟಿ, ಎಂಆರ್ಜಿ ಗ್ರೂಪ್ನ ಆಡಳಿತ ನಿರ್ದೇಶಕ ಗೌರವ್ ಪಿ. ಶೆಟ್ಟಿ ಉಪಸ್ಥಿತರಿದ್ದರು.
ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಸಮೀಕ್ಷಾ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
ಶಂಕರನಾರಾಯಣ ಎಸ್. ಶ್ರೀರಾಮ್ ಶೆಟ್ಟಿ, ಸೆಲೀನಾ, ಸುರತ್ಕಲ್ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ, ದೀಕ್ಷಿತಾ, ರಾಮಕೃಷ್ಞ ಗೌಡ ಶಿವಪುರ, ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ ಸಾಣೂರು, ಬೆಳಪು ಮಹಮ್ಮದ್ ಫಯಾಜ್ ಹುಸೇನ್,
ಉಡುಪಿ ಗ್ರಾಮೀಣ ಬಂಟರ ಸಂಘ, ತಪಸ್ಯ ಪ್ರತಿಷ್ಠಾನ, ಅರೆಹೊಳೆ ಪ್ರತಿಷ್ಠಾನ, ರಾಮಕೃಷ್ಣ ಮಿಷನ್, ಶ್ರಿವಾಣಿ ಪ್ರೌಢಶಾಲೆ, ನವಚೇತನ ಯುವಕ ಮಂಡಲ ಸುಳ್ಯ, ಮಂಜೇಶ್ವರ ಜೈ ಹನುಮಾನ್ ಸಂಸ್ಥೆಯವರಿಗೆ ಸಾಂಕೇತಿಕವಾಗಿ ನೆರವು ಹಸ್ತಾಂತರಿಸಲಾಯಿತು.
ನೆರವು ಪಡೆದವರಿಂದಲೇ ಸಹಾಯಹಸ್ತ ಮುಂದುವರಿಕೆ’
ಈ ಯೋಜನೆಯಡಿ ಐದಾರು ವರ್ಷಗಳ ಹಿಂದೆ ನೆರವು ಪಡೆದ ಅನೇಕರು ಚೆನ್ನಾಗಿ ಕಲಿತು ಉತ್ತಮ ಉದ್ಯೋಗದಲ್ಲಿದ್ದಾರೆ. ಐದು ಕುಟುಂಬಗಳಿಗೆ ನೆರವು ನೀಡಲು ನಮಗೂ ಅವಕಾಶ ಕೊಡಿ ಎಂದು ಅನೇಕರು ಪತ್ರ ಬರೆದಿದ್ದಾರೆ. 2028ರಲ್ಲಿ ಈ ಕಾರ್ಯಕ್ರಮಕ್ಕೆ ಹತ್ತು ವರ್ಷ ತುಂಬುತ್ತದೆ. ಈ ಕಾರ್ಯಕ್ರಮದಡಿ ನೆರವು ಪಡೆದು ಉತ್ತಮ ಸ್ಥಿತಿಯಲ್ಲಿರುವವರೇ ಆ ಬಳಿಕ ‘ಸಹಾಯಹಸ್ತ’ವನ್ನು ಮುಂದುವರಿಸುತ್ತಾರೆ. ಇದುವರೆಗೆ ನೆರವು ಪಡೆದ ಶೇ 10ರಷ್ಟು ಮಂದಿ ಮುಂದೆ ಬಂದರೂ 10 ಸಾವಿರ ಕುಟುಂಬಗಳಿಗೆ ನೆರವಾಗಬಹುದು. ನಾನೂ 10 ಸಾವಿರ ಕುಟುಂಬಗಳಿಗೆ ನೆರವು ಒದಗಿಸುತ್ತೇನೆ.’ ಎಂದು ಕೆ.ಪ್ರಕಾಶ್ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.