ಮಂಗಳೂರು: ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ನಿರ್ಮಾಣಗೊಂಡ ನೂತನ ಬ್ರಹ್ಮರಥವನ್ನು ಭಾನುವಾರ ಸಮರ್ಪಿಸಲಾಯಿತು.
ಇದಕ್ಕೂ ಮುನ್ನ ಕೂಳೂರು ಗೋಲ್ಡ್ ಫಿಂಚ್ ಮೈದಾನದಿಂದ ಶ್ರೀಕ್ಷೇತ್ರದವರೆಗೆ ಭವ್ಯ ಮೆರವಣಿಗೆ ಭಾನುವಾರ ನಡೆಯಿತು.
ನೂರಾರು ಮಂದಿ ಭಕ್ತರು ಭಾಗವಹಿಸಿದ್ದರು. ಬಳಿಕ ಪುಷ್ಪಾರ್ಚನೆ, ಕುಣಿತ ಭಜನೆ ನಡೆಯಿತು.
ಬ್ರಹ್ಮರಥಕ್ಕೆ ಆರತಿ ನೆರವೇರಿಸಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ‘ನಮ್ಮ ನಡೆ, ನುಡಿ ಭಗವಂತನಿಗೆ ಪ್ರಿಯವಾಗುವಂತಿರಬೇಕು’ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಮಣಿಯಾಣಿ ಎಂ., ‘₹ 70 ಲಕ್ಷದಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ಈ ರಥವು 7 ಟನ್ ಭಾರ ಇದ್ದು, ಗಣಪತಿ ದೇವರ 36 ಅವತಾರಗಳಲ್ಲಿ 12 ಅವತಾರಗಳನ್ನು ಬಿಂಬಿಸುವ ಕಲಾಕೃತಿಗಳನ್ನು ರಥದಲ್ಲಿ ಕೆತ್ತಲಾಗಿದೆ’ ಎಂದು ತಿಳಿಸಿದರು.
ರಥ ಶಿಲ್ಪಿ ಹರೀಶ್ ಆಚಾರ್ಯ ಅವರನ್ನು ಗೌರವಿಸಲಾಯಿತು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ದೇವಸ್ಥಾನದ ಶಿವಪ್ರಸಾದ್ ತಂತ್ರಿ, ಶಾಸಕ ಡಿ. ವೇದವ್ಯಾಸ ಕಾಮತ್, ಬ್ಯಾಂಕ್ ಆಫ್ ಬರೋಡದ ವಲಯ ಮುಖ್ಯಸ್ಥೆ ಗಾಯತ್ರೀ, ಪಾಲಿಕೆಯ ವಿರೋಧ ಪಕ್ಷದ ನಾಯಕ ಟಿ. ಪ್ರವೀಣ್ಚಂದ್ರ ಆಳ್ವ, ಸದಸ್ಯರಾದ ಶಶಿಧರ ಹೆಗ್ಡೆ, ಕಿರಣ್ ಕೋಡಿಕಲ್, ಗಣೇಶ್ ಕುಲಾಲ್, ಜಯಲಕ್ಷ್ಮೀ ಶೆಟ್ಟಿ, ಅನಿಲ್ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದ್ಯಮಿ ಗಿರಿಧರ ಶೆಟ್ಟಿ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸುರೇಂದ್ರ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಂ. ಸತೀಶ್ ಆಳ್ವ ಭಾಗವಹಿಸಿದ್ದರು. ಶ್ರೀಧರ ಮಣಿಯಾಣಿ ಎಂ. ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.