ADVERTISEMENT

ಬೆಳ್ತಂಗಡಿ| ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿಎಂ ಭೇಟಿ: ವಸಂತ ಬಂಗೇರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 12:54 IST
Last Updated 4 ಜೂನ್ 2023, 12:54 IST
ಬೆಳ್ತಂಗಡಿ ವಿಘ್ನೇಶ್ ಸಿಟಿಯಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು
ಬೆಳ್ತಂಗಡಿ ವಿಘ್ನೇಶ್ ಸಿಟಿಯಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಕಚೇರಿಯನ್ನು ಮಾಜಿ ಶಾಸಕ ಕೆ.ವಸಂತ ಬಂಗೇರ ಉದ್ಘಾಟಿಸಿದರು   

ಬೆಳ್ತಂಗಡಿ: ‘ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಸದ್ಯದಲ್ಲೇ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಾಗುವುದು’ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.

ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿಯ ವಿಘ್ನೇಶ್ ಸಿಟಿಯಲ್ಲಿ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಸ್ಥಳಾಂತರಗೊಂಡ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮನಾಳುವ ಕೇಂದ್ರ ಸರ್ಕಾರ ಹಾಗೂ ಹಿಂದಿನ ರಾಜ್ಯ ಸರ್ಕಾರ ರಾಜ್ಯದ ಬಡವರು, ಕಾರ್ಮಿಕರು, ರೈತರು, ಮಹಿಳಾ ವಿರೋಧಿಯಾಗಿದೆ. ಇದೀಗ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೂಲಕ ತಾಲ್ಲೂಕಿನ ಬಡವರ ಹಿತ ಕಾಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಾನು ಶಾಸಕನಾಗಿದ್ದಾಗ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ₹ 60 ಲಕ್ಷ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ನೆರವಾಗುತ್ತೇನೆ’ ಎಂದರು.

ADVERTISEMENT

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಮಾತನಾಡಿ, ‘ಸಹಕಾರ ಸಂಘ ಮಹಿಳಾ ಕಾರ್ಮಿಕರು ಸೇರಿದಂತೆ ಬಡವರನ್ನು ಸ್ವಾವಲಂಬಿಗಳನ್ನಾಗಿಸಲು ಸ್ವಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ ನೀಡಿ, ಉದ್ಯೋಗ ನೀಡಿರುವುದು ಶ್ಲಾಘನೀಯ’ ಎಂದರು.

ಉಜಿರೆ ರುಡ್ ಸೆಟ್‌ನ ನಿರ್ದೇಶಕ ಜೇಮ್ಸ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಹರಿದಾಸ್ ಎಸ್.ವಹಿಸಿದ್ದರು.

ಹಿರಿಯ ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ, ಹಿರಿಯ ವಕೀಲ ಸಂತೋಷ್ ಕುಮಾರ್, ರೈತ ನಾಯಕ ಸುರೇಶ್ ಭಟ್ ಕೊಜಂಬೆ, ಪ್ರಗತಿಪರ ಕೃಷಿಕ ಅಶೋಕ್ ಶೆಟ್ಟಿ, ಉದ್ಯಮಿ ವಿಶ್ವನಾಥ್ ನಾಯಕ್, ನಿರ್ದೇಶಕರಾದ ಶಿವಕುಮಾರ್ ಎಸ್.ಎಂ., ಸುಕನ್ಯಾ ಹರಿದಾಸ್, ರವೀಂದ್ರ ಬಿ. ಚಂಡ್ತಿಮಾರ್, ವೆಂಕಟೇಶ್ ಮಯ್ಯ, ಮನೋಹರ ನಿಡ್ಲೆ ಇದ್ದರು.

ನಿರ್ದೇಶಕ ಶೇಖರ್ ಎಲ್.ಸ್ವಾಗತಿಸಿದರು. ಶ್ರಮಶಕ್ತಿ ಸ್ವಸಹಾಯ ಗುಂಪು ಒಕ್ಕೂಟದ ಸಂಯೋಜಕ ಸಂಜೀವ ಆರ್.ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.