
ಮೂಡುಬಿದಿರೆ: ಯುಕೆಟಿಎಲ್ 400 ಕೆವಿ ವಿದ್ಯುತ್ ಪ್ರಸರಣ ಕಂಪನಿ ಕಲ್ಲಮುಂಡ್ಕೂರು ಪರಿಸರದಲ್ಲಿ ರೈತರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಮಾಡಿದ, ಪೊಲೀಸ್ ಬಲ ಪ್ರಯೋಗ ಮಾಡಿ ರೈತರನ್ನು ಬೆದರಿಸಿದ ಪ್ರಕರಣ ವಿರೋಧಿಸಿ ಭಾರತೀಯ ಕಿಸಾನ್ ಸಂಘ, ಕಲ್ಲಮುಂಡ್ಕೂರು– ನಿಡ್ಡೋಡಿ ಸಮಿತಿ ವತಿಯಿಂದ ಸೋಮವಾರ ನಿಡ್ಡೋಡಿಯಲ್ಲಿ ರೈತರ ಸ್ವಾಭಿಮಾನ ಜಾಥಾ ನಡೆಯಿತು.
ನಿಡ್ಡೋಡಿ ಚರ್ಚ್ ಧರ್ಮಗುರು ಡೆನಿಸ್ ಸುವಾರಿಸ್ ಜಾಥಾಕ್ಕೆ ಚಾಲನೆ ನೀಡಿದರು. ದೈಲಬೆಟ್ಟು ದೇವಸ್ಥಾನ ಅರ್ಚಕ ಶ್ರೀಧರ್ ಭಟ್ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇಂದಿರಾನಗರದವರೆಗೆ ಜಾಥಾ ನಡೆಯಿತು.
ಭಾರತೀಯ ಕಿಸಾನ್ ಸಂಘದ ಮಾಜಿ ಅಧ್ಯಕ್ಷ ಶಾಂತಿಪ್ರಸಾದ್ ಹೆಗ್ಡೆ ಮಾತನಾಡಿ, ಕಂಪನಿಯ ದೌರ್ಜನ್ಯದ ವಿರುದ್ಧ ಇಷ್ಟರವರೆಗೆ ಶಾಂತಿಯುತ ಪ್ರತಿಭಟನೆ ಮಾಡಿದ್ದೇವೆ. ಇನ್ನು ಮುಂದೆ ಕ್ರಾಂತಿಕಾರಿ ಹೋರಾಟ ನಡೆಸುತ್ತೇವೆ. ಶೀಘ್ರ ಮೂಡುಬಿದಿರೆಯಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಅಲ್ಫೋನ್ಸ್ ಡಿಸೋಜ ಮಾತನಾಡಿ, ಜನಪ್ರತಿನಿಧಿಗಳು, ರಾಜಕಾರಣಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಜಾಯ್ಲಸ್ ಡಿಸೋಜ ತಾಕೋಡೆ, ಚಂದ್ರಹಾಸ ಶೆಟ್ಟಿ ಇನ್ನಾ, ಲಾಯ್ಡ್ ಡಿಸೋಜ, ವಸಂತ್ ಭಟ್, ಕಲ್ಲಮುಂಡ್ಕೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೇಶವ, ಜೋಕಿಂ ಕೊರೆಯ, ಸದಸ್ಯರು, ರೈತ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.