ADVERTISEMENT

ವಾರ್ಡ್ ಸಮಿತಿಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ಇಲ್ಲ: ಪೌರ ಸಮಿತಿ

ಮಾದರಿ ವಾರ್ಡ್‌ ಸಮಿತಿಗೆ ಪೌರ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 3:48 IST
Last Updated 4 ನವೆಂಬರ್ 2020, 3:48 IST

ಮಂಗಳೂರು: ಪಾಲಿಕೆ ವ್ಯಾಪ್ತಿಯ ವಾರ್ಡ್ ಸಮಿತಿಗಳಲ್ಲಿ ಯಾವುದೇ ಪಕ್ಷದ ಕಾರ್ಯಕರ್ತರಿಗೆ ಅವಕಾಶವಿಲ್ಲ. ಈ ಸಮಿತಿಯಲ್ಲಿ ಪಾಲಿಕೆ ಸದಸ್ಯರು ಅಧ್ಯಕ್ಷರಾಗಿದ್ದು, 10 ಮಂದಿ ಸದಸ್ಯರಿರುತ್ತಾರೆ. ಅವಿರೋಧ ಆಯ್ಕೆ ಅಥವಾ ಚುನಾವಣೆ ಮೂಲಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ಮಂಗಳೂರು ಮಹಾನಗರ ಪೌರ ಸಮಿತಿ ತಿಳಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಚಂದ್ರು, 60 ವಾರ್ಡ್‌ಗಳ ಯಾವುದೇ ಸಮಿತಿಯಲ್ಲಿ ಪಕ್ಷದ ಕಾರ್ಯಕರ್ತರಿದ್ದರೆ ಅಂಥವರ ಸದಸ್ಯತ್ವ ಅನರ್ಹಗೊಳಿಸಲು ಹೋರಾಟ ಮಾಡಲಾಗುವುದು ಎಂದರು.

ವಾರ್ಡ್ ಸಮಿತಿ ರಚಿಸಲು ಸರ್ಕಾರ ಆದೇಶಿಸಿ 23 ವರ್ಷಗಳಾಗಿವೆ. ತಡವಾಗಿಯಾದರೂ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಯಾಗುತ್ತಿರುವುದು ಸ್ವಾಗತಾರ್ಹ. ಎಲ್ಲ 60 ವಾರ್ಡ್‌ಗಳಲ್ಲಿ ವಾರ್ಡ್ ಸಮಿತಿ ರಚನೆಯಾಗುವ ಮೂಲಕ ಸುಂದರ ಮಹಾನಗರ ನಿರ್ಮಾಣಕ್ಕೆ ಜನರ ಬೆಂಬಲ ನೀಡಬೇಕು ಎಂದು ಸಮಿತಿಯ ಮುಖಂಡ ಎಂ.ಜಿ. ಹೆಗಡೆ ಮನವಿ ಮಾಡಿದರು.

ADVERTISEMENT

ಸಮಿತಿ ರಚನೆಗೆ ಸಂಬಂಧಿಸಿದಂತೆ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ಜಯ ಲಭಿಸಿದೆ. ಉತ್ತಮ ವ್ಯಕ್ತಿಗಳನ್ನ ಆಯ್ಕೆ ಮಾಡಿ ವಾರ್ಡ್‌ನ ಸರ್ವತೋಮುಖ ಅಭಿವೃದ್ಧಿ ಮಾಡಲು ಸಾಧ್ಯವಿದೆ. ಸಮಿತಿಯ ಅನುಮತಿ ಇಲ್ಲದೆ ವಾರ್ಡ್‌ನಲ್ಲಿ ಯಾವುದೇ ಕೆಲಸಗಳು ಆಗುವುದಿಲ್ಲ. ದೇಶಕ್ಕೆ ಮಾದರಿಯಾಗುವ ವಾರ್ಡ್ ಕಮಿಟಿ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಸಮಿತಿಯ ಅಧ್ಯಕ್ಷ ಎಸ್.ಪಿ.ಚಂಗಪ್ಪ, ಪದಾಧಿಕಾರಿಗಳಾದ ಪದ್ಮನಾಭ ಉಳ್ಳಾಲ್, ಸ್ಟ್ಯಾನಿ ಅಲ್ವಾರಿಸ್, ಮೋಹನ್ ಪಚ್ಚನಾಡಿ, ಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.