ಮಂಗಳೂರು: ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ಗಣಿಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರದಲ್ಲಿ ಏರಿಕೆಯಾಗಿದೆ ಎಂಬದು ವದಂತಿಯಷ್ಟೇ. ಜಿಲ್ಲೆಯಲ್ಲಿ ಬೇಕಾದಷ್ಟು ಮರಳು ಸಂಗ್ರಹವಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಂಭೂರು ಹಾಗೂ ಮರವೂರಿನ ಅಣೆಕಟ್ಟೆಯಲ್ಲಿ ಹೂಳೆತ್ತುವ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ. ಸಿಹಿನೀರಿನ ಮರಳು ಇದಾಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ‘ಮರಳು ಮಿತ್ರ’ ಆ್ಯಪ್ನಲ್ಲಿ ಅರ್ಜಿ ಸಲ್ಲಿಸಿ ₹7,000ಕ್ಕೆ 10 ಟನ್ ಮರಳು ಪಡೆಯಬಹುದು. ಜಿಎಸ್ಟಿ ಮತ್ತು ಸಾಗಾಟ ವೆಚ್ಚದೊಂದಿಗೆ ನಿರ್ಮಾಣ ಕಾಮಗಾರಿಗೆ ಅಗತ್ಯ ಮರಳನ್ನು ಖರೀದಿಸಬಹುದು ಎಂದು ತಿಳಿಸಿದರು.
ಅದ್ಯಪಾಡಿ ಮತ್ತು ಶಂಭೂರು ಮರಳು ಸ್ಟಾಕ್ ಯಾರ್ಡ್ನಲ್ಲಿ ಕ್ರಮವಾಗಿ 9,000 ಮತ್ತು 12 ಸಾವಿರ ಟನ್ ಮರಳು ಲಭ್ಯವಿದೆ. ಸಂಗ್ರಹಿಸಿಡಲು ಜಾಗದ ಕೊರತೆ ಇದೆ. ಬೇಡಿಕೆಗೆ ತಕ್ಕಂತೆ ಮರಳು ಜಿಲ್ಲೆಯ ನಿರ್ಮಾಣ ಕಾಮಗಾರಿಗೆ ಲಭ್ಯವಾಗಲಿದೆ. ಹೊರ ಜಿಲ್ಲೆಗಳಿಂದ ಮರಳಿಗೆ ಬೇಡಿಕೆ ಇದ್ದರೂ ಅನುಮತಿ ನೀಡಲಾಗಿಲ್ಲ. ಸದ್ಯ ಜಿಲ್ಲೆಯ ಬೇಡಿಕೆಗೆ ಅನುಗುಣವಾಗಿ ಮರಳು ಪೂರೈಕೆಗೆ ಕ್ರಮ ವಹಿಸಲಾಗುವುದು. ಹಾಗಾಗಿ ಯಾರೂ ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.