ಉಳ್ಳಾಲ (ದಕ್ಷಿಣ ಕನ್ನಡ): ಚೀನಾದಲ್ಲಿ ವ್ಯಾಪಿಸಿರುವ ಕೊರೊನ ವೈರಸ್ನಿಂದಾಗಿ ಹಾಂಗ್ಕಾಂಗ್ಪ್ರವಾಸಿ ಹಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿಕೊಂಡಿದ್ದ ಕುಂಪಲದ ಗೌರವ್ ತಾಯ್ನಾಡಿಗೆ ವಾಪಸಾಗಿದ್ದು, ಸಂಜೆ ಕುಂಪಲದ ಮನೆಗೆ ತಲುಪಿದ್ದಾರೆ.
ಗೌರವ್ ಹಾಂಗ್ಕಾಂಗ್ನಪ್ರವಾಸಿ ಹಡಗಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹಾಂಕ್ಕಾಂಗ್ನಿಂದ ಹೊರಟಿದ್ದ ವಿಲಾಸಿ ಹಡಗು ತೈವಾನ್ ಪ್ರವಾಸ ಮುಗಿಸಿ ಹಿಂದಿರುಗಿತ್ತು.ಹಾಂಕ್ಕಾಂಗ್ ಬಂದರಿಗೆ ಬಂದಿದ್ದ ಗೌರವ್ ಇದ್ದ ಹಡಗನ್ನು ಸುರಕ್ಷತೆಯ ದೃಷ್ಟಿಯಿಂದ ತಟದ ಸಮೀಪವೇ ತಡೆಯಲಾಗಿತ್ತು. ಪ್ರವಾಸಿಗರೊಂದಿಗೆ ಗೌರವ್ ಸಹ ಹಡಗಿನಲ್ಲೇ ಸಿಲುಕಿದ್ದರು. ಹೀಗಾಗಿ ಕಳೆದ ಸೋಮವಾರ ನಡೆಯಬೇಕಾಗಿದ್ದ ಗೌರವ್ ಮದುವೆಯನ್ನು ರದ್ದುಮಾಡಲಾಗಿತ್ತು.
ಕೊರೊನಾ ಸೋಂಕಿಗೆ ಸಂಬಂಧಿಸಿದ ಸುರಕ್ಷತೆಯ ವಿಧಿವಿಧಾನಗಳು ಮುಗಿದ ಬಳಿಕ ಕಳೆದ ಭಾನುವಾರ ಹಡಗಿನಲ್ಲಿದ್ದ ಪ್ರವಾಸಿಗರನ್ನು ಬಂದರಿನಿಂದ ಅವರ ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಗೌರವ್ ಸೇರಿದಂತೆ ಹಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಅವರ ತಾಯ್ನಾಡಿಗೆ ಕಳುಹಿಸಿಕೊಡಲಾಗಿದೆ. ಚೀನಾ ಸೇರಿದಂತೆ ಕೆಲವೊಂದು ದೇಶಗಳ ಸಿಬ್ಬಂದಿಯನ್ನು ಸುರಕ್ಷತೆಯ ನಿಟ್ಟಿನಲ್ಲಿ ಹಾಂಕ್ಕಾಂಗ್ನಲ್ಲೇ ಉಳಿಸಿಕೊಂಡಿದೆ.
ಮನೆಗೆ ಬಂದಿರುವ ಗೌರವ್ ಪ್ರತಿಕ್ರಿಯಿಸಿ, ‘ಡ್ರೀಮ್ ವರ್ಲ್ಡ್ ಹಡಗಿನ ಮುಖ್ಯಸ್ಥರು ಪ್ರವಾಸಿಗರ ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಕಾಳಜಿವಹಿಸಿದ್ದು, ನನ್ನನ್ನು ಭಾರತಕ್ಕೆಕಳುಹಿಸಲು ವಿಶೇಷವಾಗಿ ಸಹಕರಿಸಿದ್ದಾರೆ. ಹಾಂಗ್ಕಾಂಗ್ನಿಂದ ಹೆಚ್ಚಿನ ದೇಶಗಳಿಗೆ ತೆರಳುವ ವಿಮಾನಗಳು ರದ್ದಾಗಿರುವುದರಿಂದ ಆದೇಶದ ಸಿಬ್ಬಂದಿಯ ರಕ್ಷಣೆಯನ್ನು ಕಂಪನಿ ವಹಿಸಿಕೊಂಡಿದ್ದು, ಸೋಮವಾರ ನನ್ನನ್ನು ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಮುಂಬೈ ಮಾರ್ಗವಾಗಿ ಕಳುಹಿಸಿಕೊಡಲಾಗಿದೆ. ಇಂದು ಮಂಗಳೂರಿಗೆ ಬಂದಿದ್ದೇನೆ’ ಎಂದರು.
‘ಮದುವೆಯ ಕುರಿತು ಇನ್ನೆರಡು ದಿನಗಳಲ್ಲಿ ದಿನಾಂಕ ನಿಗದಿಪಡಿಸಲಿದ್ದು, ಸದ್ಯಕ್ಕೆ ಸಮಸ್ಯೆ ಬಗೆಹರಿದು, ಕಂಪನಿಯಿಂದ ಕರೆ ಬಂದ ಬಳಿಕ ಉದ್ಯೋಗಕ್ಕೆ ತೆರಳುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.