
ವಿಟ್ಲ: ‘ಗ್ರಾಹಕರೇ ಸಹಕಾರಿ ಸಂಘದ ಜೀವಾಳ. ಸಾಲ ಪಡೆಯುವಾಗ ಇರುವ ಹುಮ್ಮಸ್ಸು ಸಾಲದ ಕಂತು ಪಾವತಿಸುವಾಗಲೂ ಇರಬೇಕು. ಸಂಸ್ಕಾರ ಸಂಸ್ಕೃತಿಗಳಿಗೆ ಪೂರಕ ವ್ಯವಹಾರಗಳು ಆಗಬೇಕು’ ಎಂದು ಒಡಿಯೂರು ಗುರುದೇವ ದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 24ನೇ ಕಲ್ಲಡ್ಕ ಶಾಖೆಯ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಸಹಕಾರ ತತ್ವಗಳನ್ನು ಅಳವಡಿಸಿಕೊಂಡು ಠೇವಣಿ, ಸಾಲದ ವ್ಯವಹಾರ ನಡೆಸಿಕೊಂಡಾಗ ಅಭಿವೃದ್ಧಿಯ ಹಾದಿ ತೆರೆದುಕೊಳ್ಳುತ್ತದೆ. ಈ ಭರವಸೆಯ ಹಾದಿಯಲ್ಲಿ ನಡದರೆ ಸೋಲು ಬರಲು ಸಾಧ್ಯವಿಲ್ಲ ಎಂದು ಹೇಳಿದರು.
ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿ, ಸೇವಾ ಮನೋಭಾವದಿಂದ ಯಶಸ್ಸು ಸಾಧ್ಯ. ಸಹಕಾರ ಸಂಘದಲ್ಲಿ ವಿಶ್ವಾಸ ಶ್ರದ್ಧೆಯಿಂದ ತೊಡಗಿಸಿಕೊಂಡದ್ದರಿಂದ ಸಮೃದ್ಧಿಯಾಗಿದೆ. ಗ್ರಾಹಕರು ಮತ್ತು ಸಂಘದ ನಡುವೆ ಆಡಳಿತ ಮಂಡಳಿ, ಸಿಬ್ಬಂದಿ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ರೈ ಎ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ ಭಂಡಾರಿ, ಬಂಟ್ವಾಳ ತಾಲ್ಲೂಕು ಬಂಟವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ. ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ. ಭಟ್, ಮುಖಂಡರಾದ ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಕಲ್ಲಡ್ಕ ಉಮಾಶಿವ ಕ್ಷೇತ್ರದ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಗೋಳ್ತಮಜಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮಾ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಜಿಲ್ಲಾ ಸೌಹಾರ್ದ ಅಧಿಕಾರಿ ನಂದನ್ ಜಿ.ಎನ್, ಲಲಿತಾ ರಾವ್ ವಾಣಿಜ್ಯ ಸಂಕೀರ್ಣ ಮಾಲಕಿ ಲಲಿತಾ ರಾವ್, ಕಲ್ಲಡ್ಕ ಸುಮಂಗಲಾ ಕೊಆಪರೇಟಿವ್ ಬ್ಯಾಂಕ್ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಒಡಿಯೂರು ಗ್ರಾಮ ವಿಕಾಸ ಯೋಜನೆಯ ವಲಯ ಮೇಲ್ವಿಚಾರಕಿ ಜಯಂತಿ ಜಯಲಕ್ಷ್ಮೀ ಪ್ರಭು, ಕಲ್ಲಡ್ಕ ಶಾಖೆಯ ವ್ಯವಸ್ಥಾಪಕಿ ಅಶ್ವಿತಾ ಕೊಟ್ಟಾರಿ, ಶಾಖೆ ಸಿಬ್ಬಂದಿ, ಸಂಘದ ಆಡಳಿತ ಮಂಡಳಿ ನಿರ್ದೇಶಕರು, ಸಹಕಾರಿ ಮುಖಂಡರು, ಗ್ರಾಹಕರು ಭಾಗವಹಿಸಿದ್ದರು. ಜಯಂತಿ ಪ್ರಾರ್ಥಿಸಿದರು. ಒಡಿಯೂರು ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ವಂದಿಸಿದರು. ಲೋಕೇಶ್ ರೈ ಬಾಕ್ರಬೈಲು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.