ಪೊಲೀಸ್
ಸಾಂದರ್ಭಿಕ ಚಿತ್ರ
ಮಂಗಳೂರು: ಚಿನ್ನ ಮತ್ತು ಬೆಳ್ಳಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂಬ ಆಮಿಷವೊಡ್ಡಿ, ಆನ್ಲೈನ್ನಲ್ಲಿ ₹ 7.19 ಲಕ್ಷ ಹಣ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ದಕ್ಷಿಣ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಅ.3ರಂದು ಫೇಸ್ಬುಕ್ ನೋಡುವಾಗ ಹೂಡಿಕೆ ಬಗ್ಗೆ ಜಾಹೀರಾತು ಕಾಣಿಸಿತ್ತು. ಅದರಲ್ಲಿ ನೀಡಿದ್ದ ಕೊಂಡಿಯನ್ನು ಕ್ಲಿಕ್ಕಿಸಿ ನೋಂದಣಿ ಮಾಡಿಸಿಕೊಂಡೆ. ಬಳಿಕ ನನಗೆ ಟೆಲಿಗ್ರಾಂ ಆ್ಯಪ್ನಲ್ಲಿ ‘ಟ್ರಿಡ್ಗ್ರಿಪ್ ಅಕೌಂಟ್ ಮ್ಯಾನೇಜರ್’ ಎಂಬ ಗ್ರೂಪ್ಗೆ ಸೇರಿಸಿದರು. ಅದರಲ್ಲಿ ಸಾಗರ್ ಎಂಬಾತ ಹೆಸರು ನೋಂದಾಯಿಸಲು ₹ 19,300 ಅನ್ನು ಆತ ಸೂಚಿಸಿದ ಖಾತೆಗೆ ಜಮೆ ಮಾಡಬೇಕು ಎಂದು ಹೇಳಿದ್ದ. ನಂತರ ಸಾತ್ವಿಕ್ ಶೆಟ್ಟಿ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ವ್ಯಕ್ತಿ ನನ್ನಲ್ಲಿ ಮಾತನಾಡಿ, ಚಿನ್ನ ಮತ್ತು ಬೆಳ್ಳಿಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ಸಲಹೆ ನೀಡಿದ್ದ. ಬಂದ ಹಣದಲ್ಲಿ ₹ 13 ಲಕ್ಷ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದ. ಆತ ಸೂಚಿಸಿದ್ದ ಖಾತೆಗೆ ಅ.8ರಂದು ₹ 7 ಲಕ್ಷ ಹಣ ಜಮೆ ಮಾಡಿದ್ದೆ. ಅದೇ ದಿನ ಒಮ್ಮೆ ನನ್ನ ಖಾತೆಗೆ ₹ 1,420 ಹಾಗೂ ₹ 11,539 ಸಂದಾಯವಾಗಿತ್ತು. ಆ ಬಳಿಕ ಸಾತ್ವಿಕ್ ಶೆಟ್ಟಿ ಮತ್ತಷ್ಟು ಹಣ ಹೂಡಿಕೆ ಮಾಡಲು ಒತ್ತಾಯಿಸಿದ. ಆಗ ಸಂಶಯ ಬಂದು ವಿಚಾರಿಸಿದಾಗ ಮೋಸಹೋಗಿದ್ದು ಗೊತ್ತಾಯಿತು ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.