ADVERTISEMENT

ಸುಳ್ಯ: ಸಚಿವ ಅಂಗಾರಗೆ ಕ್ಷೇತ್ರದಲ್ಲೇ ವಿರೋಧ

ಸುಳ್ಯ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಒತ್ತಾಯ; ರಹಸ್ಯ ಸಭೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:02 IST
Last Updated 25 ಮಾರ್ಚ್ 2023, 5:02 IST
 ಎಸ್. ಅಂಗಾರ
ಎಸ್. ಅಂಗಾರ    

ಸುಳ್ಯ (ದಕ್ಷಿಣ ಕನ್ನಡ): ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಎಸ್. ಅಂಗಾರ ಅವರೇ ಮತ್ತೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅಂಗಾರ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿಯ ಗುಂಪೊಂದು ರಹಸ್ಯ ಸಭೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

19 ಗ್ರಾಮಗಳ 50ಕ್ಕೂ ಹೆಚ್ಚು ಪ್ರಮುಖರು ಇಲ್ಲಿಯ ನಿರೀಕ್ಷಣಾ ಮಂದಿರದಲ್ಲಿ ಸಭೆ ಸೇರಿ, ಅಂಗಾರ ಅವರನ್ನು ಮತ್ತೆ ಅಭ್ಯರ್ಥಿಯನ್ನಾಗಿ ಮಾಡದಂತೆ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ಗುರುವಾರ ಪಟ್ಟಣದ ಸಮೀಪ ‘ಅಂಗಾರ ಸಾಕು– ಹೊಸಬರು ಬೇಕು, ಈ ಬಾರಿ ಬಿಜೆಪಿಯ ಅಭ್ಯರ್ಥಿ ಬದಲಾವಣೆಗೆ ನಮ್ಮ ಮತ’ ಎಂಬ ಬ್ಯಾನರ್ ಅಳವಡಿಸಲಾಗಿತ್ತು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು, ‘ಯಾರೇ ಸಭೆ ನಡೆಸಿದ್ದರೂ, ಬ್ಯಾನರ್ ಅಳವಡಿಸಿದ್ದರೂ ಪಕ್ಷದ ಪ್ರಮುಖರ ಅಭಿಪ್ರಾಯದಂತೆ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಬ್ಯಾನರ್ ಅನ್ನು ಯಾರು ಬೇಕಾದರೂ ಅಳವಡಿಸಬಹುದು. ಬಿಜೆಪಿ ಕಾರ್ಯಕರ್ತರೇ ಅಳವಡಿಸಿರಬೇಕು ಎಂದೇನೂ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.