ಮಂಗಳೂರು: ಕಡಬ ತಾಲ್ಲೂಕಿನ ಕೌಕ್ರಾಡಿಯ ನೂಜಿ ಗ್ರಾಮದಲ್ಲಿ ಮಹಿಳೆಗೆ ಚೂರಿಯಿಂದ ಇರಿದು ಚಿನ್ನಾಭರಣ ದರೋಡೆ ಮಾಡಲಾಗಿದೆ.
ತುಕ್ರಪ್ಪ ಶೆಟ್ಟಿ ಅವರು ಭಾನುವಾರ ರಾತ್ರಿ ತಮ್ಮ ಮನೆಯ ಮೊದಲನೇ ಮಹಡಿಯಲ್ಲಿ ಮಲಗಿದ್ದರು. ಬೆಳಗಿನ ಜಾವ 2.15 ಕ್ಕೆ 9 ಜನ ಅಪರಿಚಿತ ಮುಸುಕುಧಾರಿಗಳು ಮನೆಗೆ ನುಗ್ಗಿದ್ದಾರೆ. ಅವರನ್ನು ತಡೆಯಲು ಯತ್ನಿಸಿದಾಗ ಹಲ್ಲೆ ನಡೆಸಿ ಚೂರಿಯನ್ನು ತೋರಿಸಿ ಕೊಲ್ಲುವುದಾಗಿ ಬೆದರಿಸಿದ್ದಾರೆ. ಈ ವೇಳೆ ಪ್ರತಿರೋಧ ತೋರಿದ ತುಕ್ರಪ್ಪ ಶೆಟ್ಟಿಯವರ ಹೆಂಡತಿಯ ಹೊಟ್ಟೆಗೆ ಆರೋಪಿಗಳು ಚೂರಿಯಿಂದ ಇರಿದಿದ್ದಾರೆ. ಮನೆಯಲ್ಲಿದ್ದ 40 ಪವನ್ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುತ್ತಾರೆ.
ತುಕ್ರಪ್ಪ ಶೆಟ್ಟಿರವರ ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.