ADVERTISEMENT

ಧರ್ಮಸ್ಥಳ: ಬಾಹುಬಲಿ ಸ್ವಾಮಿಯ ಪಾದಾಭಿಷೇಕ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:17 IST
Last Updated 4 ಫೆಬ್ರುವರಿ 2023, 5:17 IST
ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಶುಕ್ರವಾರ ಪಾದಾಭಿಷೇಕ ನಡೆಯಿತು.
ಬಾಹುಬಲಿ ಸ್ವಾಮಿಗೆ 216 ಕಲಶಗಳಿಂದ ಶುಕ್ರವಾರ ಪಾದಾಭಿಷೇಕ ನಡೆಯಿತು.   

ಉಜಿರೆ: ಸ್ವಾಧ್ಯಾಯದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಇದರಿಂದಾಗಿ ಕೇವಲ ಜ್ಞಾನ ಪಡೆದು ಮೋಕ್ಷ ಸಾಧನೆ ಮಾಡಬಹುದು ಎಂದು ಸುಖಸಾಗರ ಮುನಿ ಮಹಾರಾಜ್‌ ಹೇಳಿದರು.

ಧರ್ಮಸ್ಥಳದ ರತ್ನಗಿರಿಯಲ್ಲಿ ಶುಕ್ರವಾರ ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ಸಂದರ್ಭ ಮಂಗಲ ಪ್ರವಚನ ನೀಡಿದರು. ಶ್ರಾವಕರು ದೇವರು, ಗುರುಗಳು ಹಾಗೂ ಶಾಸ್ತ್ರದ ಅಧ್ಯಯನ ಮೊದಲಾದ ಷಟ್ಕರ್ಮಗಳನ್ನು ನಿತ್ಯವೂ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಭಯ-ಭಕ್ತಿ ಇದ್ದಲ್ಲಿ ಮನುಷ್ಯ ತನ್ನನ್ನು ತಾನೇ ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಮುನಿ ಪರಂಪರೆ ಇರುವ ವರೆಗೆ ಧರ್ಮ ಇರುತ್ತದೆ. ಧರ್ಮದ ಮರ್ಮವನ್ನರಿತು ನಿತ್ಯವೂ ಧರ್ಮದ ಅನುಷ್ಠಾನ ಮಾಡಿದಾಗ ಜೀವನ ಪಾವನವಾಗುತ್ತದೆ. ಗೃಹಾಲಯ, ಜಿನಾಲಯ ಮತ್ತು ದೇವಾಲಯಗಳು ನಮ್ಮನ್ನು ಉದ್ಧರಿಸುವ ಕೇಂದ್ರಗಳಾಗಿವೆ. ನಿತ್ಯವೂ ಎಲ್ಲರೂ ದೇವರ ದರ್ಶನ ಮಾಡಿ, ಸ್ವಾಧ್ಯಾಯ ಮಾಡಬೇಕು ಎಂಡಿದರು.

ADVERTISEMENT

ಬೆಳಿಗ್ಗೆ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಮಂಗಲ ದ್ರವ್ಯಗಳೊಂದಿಗೆ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನಡೆಯಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ.ರಾಜೇಂದ್ರ ಕುಮಾರ್, ಡಾ.ನೀತಾ ರಾಜೇಂದ್ರ ಕುಮಾರ್ ಪೂಜೆಯಲ್ಲಿ ಭಾಗವಹಿಸಿದರು.

ಪಂಚನಮಸ್ಕಾರ ಮಂತ್ರಪಠಣ, ಜಿನಭಜನೆ, ಭಕ್ತಿಗೀತೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.