ADVERTISEMENT

ಹೈಟೆನ್ಷನ್‌ ತಂತಿ ತಗುಲಿ ಪೇಂಟರ್‌ ಸಾವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 3:08 IST
Last Updated 7 ಡಿಸೆಂಬರ್ 2023, 3:08 IST
   

ಮಂಗಳೂರು: ನಗರದ ಅಳಪೆ ವಾರ್ಡ್‌ನ ಶಿರ್ಲ ಪಡ್ಪುವಿನ ಮನೆಯೊಂದರ ಪೇಂಟಿಂಗ್‌ ಮಾಡುವ ಸಂದರ್ಭದಲ್ಲಿ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಗಾಯಗೊಂಡಿದ್ದ ಪೇಂಟರ್‌ ಮಂಗಳವಾರ ಮೃತಪಟ್ಟಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಂಟ್ವಾಳ ತಾಲ್ಲೂಕಿನ ಪರಂಗಿಪೇಟೆಯ ಅರ್ಕುಳ ವಳಚ್ಚಿಲ್ ನಿವಾಸಿ ಜೈನುದ್ದೀನ್ ಅಬ್ದುಲ್ ರೆಹಮಾನ್ (47) ಮೃತರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಅಬ್ದುಲ್‌ ರಹಮಾನ್‌ ಅವರು ಶಿರ್ಲ ಪಡ್ಪುವಿನ ಹೆನ್ರಿ ಡಿಸೋಜ ಅವರ ಮನೆಯಲ್ಲಿ ಸೋಮವಾರ ಪೇಂಟಿಂಗ್‌ ಮಾಡುತ್ತಿದ್ದರು. ಮನೆಯ ಚಾವಣಿಯ ಬಳಿ ಏಣಿಯಲ್ಲಿ ನಿಂತು ಪೇಂಟಿಂಗ್‌ ಮಾಡುತ್ತಿದ್ದಾಗ ಹೈಟೆನ್ಷನ್ ವಿದ್ಯುತ್‌ ಹರಿಯುತ್ತಿದ್ದ ತಂತಿಯು ಏಣಿಯ ಸಂಪರ್ಕಕ್ಕೆ ಬಂದಿತ್ತು. ಇದರಿಂದ ವಿದ್ಯುದಾಘಾತಕ್ಕೆ ಒಳಗಾದ ಅವರು ಎರಡನೇ ಮಹಡಿಯಿಂದ ಕೆಳಕ್ಕೆ ಕುಸಿದು ಬಿದ್ದಿದ್ದರು. ಅವರೊಂದಿಗೆ ಕೆಲಸ ಮಾಡುತ್ತಿದ್ದ ರಾಜೇಶ್ ಮತ್ತು ಬಾಲಕೃಷ್ಣ ತಕ್ಷಣವೇ ಅವರನ್ನು ಆಂಬುಲೆನ್ಸ್‌ ಮೂಲಕ ಕರೆದೊಯ್ದು ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಿಸಿದ್ದರು. ಅವರು ಮಂಗಳವಾರ ಬೆಳಿಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದರು.’

ADVERTISEMENT

‘ಮನೆಯ ಮಾಲೀಕ  ಹೆನ್ರಿ ಡಿಸೋಜ ಸುರಕ್ಷತಾ ಕ್ರಮಗಳನ್ನು ವಹಿಸದ ಕಾರಣ ಅವಘಡ ಸಂಭವಿಸಿ ಅಬ್ದುಲ್ ರೆಹಮಾನ್ ಮೃತಪಟ್ಟಿದ್ದಾರೆ. ಹೆನ್ರಿ  ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮೃತ ವ್ಯಕ್ತಿಯ ಸಹೋದರ ಮೊಹಮ್ಮದ್‌ ಅಶ್ರಫ್‌  ಠಾಣೆಗ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.