ಉಳ್ಳಾಲ: ತಾಳೆ ಬೆಳೆ ಅಭಿವೃದ್ಧಿಗೆ ರಾಷ್ಟ್ರೀಯ ಖಾದ್ಯ ತೈಲ ಅಭಿವೃದ್ಧಿ ಯೋಜನೆಯಡಿ ಸರ್ಕಾರ ಆದ್ಯತೆ ನೀಡುತ್ತಿದ್ದು, ತಾಳೆಬೆಳೆಯನ್ನು ಅಭಿವೃದ್ಧಿಗೊಳಿಸಲು ಮುಂದೆ ಬರುವ ರೈತರಿಗೆ ಸರ್ಕಾರದ ಸಹಾಯಧನದ ಪಡೆಯಲು ಅವಕಾಶವಿದೆ ಎಂದು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ತಿಳಿಸಿದರು.
ಕೋಟೆಕಾರು ಬೀರಿಯ ಕೆ.ಸುಬ್ಬಣ್ಣಯ್ಯ ಸ್ಮಾರಕ ಕೋಟೆಕಾರು ಸಹಕಾರ ಸೌಧದಲ್ಲಿ ಗ್ರಾಮ ಸಂಪರ್ಕ ಅಭಿಯಾನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆ ಮತ್ತು ಸರ್ಕಾರಿ ಯೋಜನೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಸರ್ಕಾರ ಪ್ರತಿ ಹೆಕ್ಟೇರ್ ತಾಳೆ ಬೆಳೆ ಅಭಿವೃದ್ಧಿಗೆ ₹29 ಸಾವಿರ, ನಾಲ್ಕು ವರ್ಷಗಳ ಕಾಲ ನಿರ್ವಹಣೆಗೆ ಸಹಾಯಧನ ನೀಡುತ್ತಿದೆ. ತಾಳೆ ಹಣ್ಣುಗಳನ್ನು ನೋಂದಾಯಿತ ಕಂಪನಿಗಳು ಸರ್ಕಾರ ನಿಗದಿ ಪಡಿಸಿದ ದರದಲ್ಲಿ ಖರೀದಿಸುತ್ತಿವೆ. ಖಾಲಿ ಜಮೀನು ಇರುವ ರೈತರು ಈ ಬೆಳೆ ಬೆಳೆಯಲು ಮುಮದಾಗಬೇಕು ಎಂದರು.
ಹಣ್ಣುಗಳ ಪ್ರದೇಶ ವಿಸ್ತರಣೆ, ನೀರಾವರಿ ಅಳವಡಿಕೆ, ಜೇನು ಕೃಷಿಗೆ ಹಲವು ಯೋಜನೆಗಳಿವೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ವಹಿಸಿದ್ದರು.
ಪತ್ರಕರ್ತ ವಾಲ್ಟರ್ ನಂದಳಿಕೆ, ಕೋಟೆಕಾರು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಬಗಂಬಿಲ, ವಿರೋಧ ಪಕ್ಷದ ನಾಯಕ ಅಹ್ಮದ್ ಬಾವ ಅಜ್ಜಿನಡ್ಕ, ಕೋಟೆಕಾರು ಬ್ಯಾಂಕ್ ಉಪಾಧ್ಯಕ್ಷ ಕೆ.ಬಿ.ಅಬೂಸಾಲಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್, ನಿರ್ದೇಶಕರಾದ ಕೃಷ್ಣಪ್ಪ ಸಾಲ್ಯಾನ್, ಅರುಣ್ ಕುಮಾರ್, ಬಾಬು ನಾಯ್ಕ್, ಸುರೇಖಾ ಚಂದ್ರಹಾಸ್, ಉದಯ ಕುಮಾರ್ ಶೆಟ್ಟಿ ಭಾಗವಹಿಸಿದ್ದರು. ಜೇನು ಕೃಷಿಕ ಭರತ್ ರಾಜ್ ಸೊರಕೆ ಸ್ವಾಗತಿಸಿದರು. ಸುಮಲತಾ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.
ಹಲಸು ಮೇಳ ಉದ್ಘಾಟನೆ: ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಹಲಸು ಮೇಳಕ್ಕೆ ಪತ್ರಕರ್ತ ವಾಲ್ಟರ್ ನಂದಳಿಕೆ ಚಾಲನೆ ನೀಡಿದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಕೃಷಿ ಉಪಕರಣಗಳ ಪ್ರದರ್ಶನ, ಮಾಹಿತಿ, ಖಾದ್ಯಗಳ ಮಾರಾಟ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.