ADVERTISEMENT

ದಕ್ಷಿಣ ಕನ್ನಡ | ಶಿರಾಡಿ ಗ್ರಾ.ಪಂ.ಕಚೇರಿ ಸ್ಥಳಾಂತರ; ವಾಗ್ವಾದ

ಪರ–ವಿರೋಧ ಕುರಿತು ಗ್ರಾಮಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 4:59 IST
Last Updated 11 ಸೆಪ್ಟೆಂಬರ್ 2025, 4:59 IST
ಕಡಬ ತಾಲ್ಲೂಕು ಶಿರಾಡಿ ಗ್ರಾಮಸಭೆಯಲ್ಲಿ ಪಂಚಾಯಿತಿ ಕಚೇರಿ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು
ಕಡಬ ತಾಲ್ಲೂಕು ಶಿರಾಡಿ ಗ್ರಾಮಸಭೆಯಲ್ಲಿ ಪಂಚಾಯಿತಿ ಕಚೇರಿ ಸ್ಥಳಾಂತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು   

ಶಿರಾಡಿ (ಉಪ್ಪಿನಂಗಡಿ): ಗ್ರಾಮ ಪಂಚಾಯಿತಿ ಕಚೇರಿಯನ್ನು ಉದನೆಯಿಂದ ಶಿರಾಡಿಗೆ ಸ್ಥಳಾಂತರ ವಿಚಾರಕ್ಕೆ ಇಲ್ಲಿ ಶಿರಾಡಿಯಲ್ಲಿ ಬುಧವಾರ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು.

ಪರ–ವಿರೋಧದ ಹಿನ್ನೆಲೆಯಲ್ಲಿ ಕಚೇರಿ ಸ್ಥಳಾಂತರಕ್ಕೆ ಒಂದನೇ ವಾರ್ಡ್‌ನ ಗ್ರಾಮಸ್ಥರ ಆಕ್ಷೇಪ ಹಾಗೂ 2 ಮತ್ತು 3ನೇ ವಾರ್ಡ್‌ನ ಗ್ರಾಮಸ್ಥರ ಬೆಂಬಲ ಇರುವ ಬಗ್ಗೆ ಅಧ್ಯಕ್ಷ ಕಾರ್ತಿಕೇಯನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

ವಿಷಯ ಪ್ರಸ್ತಾಪಿಸಿದ 1ನೇ ವಾರ್ಡ್‌ ವ್ಯಾಪ್ತಿಯ ಗ್ರಾಮಸ್ಥರು, ಉದನೆ ಪೇಟೆಯಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಯನ್ನು ಇದೀಗ ಏಕಾಏಕಿ ಶಿರಾಡಿಗೆ ಸ್ಥಳಾಂತರಿಸಿ, ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಲಾಗಿದೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಆಗಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್, ಶಿರಾಡಿ ಸ್ವಂತ ಕಟ್ಟಡ ಇಲ್ಲದ ಗ್ರಾಮ ಪಂಚಾಯಿತಿ ಕಚೇರಿಯು ಉದನೆಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ನಡೆಯುತ್ತಿದೆ. ಸ್ವಂತ ಕಟ್ಟಡ ಇಲ್ಲದ ಪಂಚಾಯಿತಿಗಳಿಗೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಸುತ್ತೋಲೆ ಬಂದಿದೆ. ಶಿರಾಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲೇ ಜಾಗ ಕಾದಿರಿಸಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ. ₹ 45 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ತಾಲ್ಲೂಕು ಪಂಚಾಯಿತಿ ಸಿಇಒ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡೇ ಕೆಲಸ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆಸ್ಪತ್ರೆ ಮೇಲ್ದರ್ಜೆಗೇರಿಸಿ

ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್ ಟೆಕ್ನಿಷಿಯನ್ ಸೇರಿ ಪ್ರಮುಖ ಹುದ್ದೆಗಳು ಖಾಲಿ ಇವೆ. ಆಸ್ಪತ್ರೆ ಆರಂಭವಾಗಿ 25 ವರ್ಷ ಆಗಿದೆ. 5ರಿಂದ 10 ಬೆಡ್‌ನ ಅವಶ್ಯಕತೆಯೂ ಇದೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಶಿರಾಡಿಯಲ್ಲಿ ಹೊರಠಾಣೆ ಆಗಲಿ

ಈ ಹಿಂದೆ ಉದನೆಯಲ್ಲಿದ್ದ ಶಿರಾಡಿ ಹೊರ ಠಾಣೆ ನೆಲ್ಯಾಡಿಗೆ ಸ್ಥಳಾಂತರಗೊಂಡಿದೆ. ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಗೆ ಪ್ರಕ್ರಿಯೆ ನಡೆಯುತ್ತಿದ್ದು, ನೆಲ್ಯಾಡಿಯಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಆದಲ್ಲಿ ಶಿರಾಡಿಯಲ್ಲಿ ಹೊರ ಠಾಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ನೋಡಲ್‌ ಅಧಿಕಾರಿ ಆರ್‌ಡಿಡಬ್ಲೂಎಸ್‌ಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುರೇಶ್, ಗ್ರಾಮಸ್ಥರಾದ ದಿವಾಕರ ಗೌಡ, ಜಾನ್, ಲಕ್ಷ್ಮಣ ಗೌಡ, ರಾಧಾ ತಂಗಚ್ಚನ್ ಮಾತನಾಡಿದರು. ಉಪಾಧ್ಯಕ್ಷೆ ವಿನಿತಾ ಎಂ.ಬಿ., ಸದಸ್ಯರಾದ ಎಂ.ಕೆ. ಪೌಲೋಸ್, ತೋಮಸ್ ಜೋನ್, ಲಕ್ಷ್ಮಣ ಗೌಡ, ರಾಧ ಹಾಜರಿದ್ದರು. ಕಾರ್ಯದರ್ಶಿ ಶಾರದಾ ಸ್ವಾಗತಿಸಿದರು. ಸ್ಮಿತಾ ವರದಿ ವಾಚಿಸಿದರು. ಏಲಿಯಾಸ್ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.