ADVERTISEMENT

ಪಿಂಚಣಿ ವಿಳಂಬ: ಬೀಳ್ಕೊಡುಗೆಯ ಉಡುಗೊರೆ ವಾಪಸ್‌ ನೀಡಿದ ನಿವೃತ್ತ ನೌಕರ

ಬೇಸತ್ತ ನಿವೃತ್ತ ಅಧಿಕಾರಿಯಿಂದ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2023, 22:15 IST
Last Updated 4 ಜನವರಿ 2023, 22:15 IST
ಬೀಳ್ಕೊಡುಗೆ ಸಮಾರಂಭದಲ್ಲಿ ನೀಡಲಾದ ಪೇಟ, ಹಾರ, ಶಾಲುಗಳನ್ನು ಸೂಪರಿಂಟೆಂಡ್‌ ಅವರ ಮೇಜಿನ ಮೇಲೆ ಇಟ್ಟಿರುವುದು
ಬೀಳ್ಕೊಡುಗೆ ಸಮಾರಂಭದಲ್ಲಿ ನೀಡಲಾದ ಪೇಟ, ಹಾರ, ಶಾಲುಗಳನ್ನು ಸೂಪರಿಂಟೆಂಡ್‌ ಅವರ ಮೇಜಿನ ಮೇಲೆ ಇಟ್ಟಿರುವುದು   

ಮಂಗಳೂರು: ತಮ್ಮ ಪಿಂಚಣಿ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ನಿವೃತ್ತ ಸಹಾಯಕ ಕಾರ್ಯದರ್ಶಿ ಜಿ.ಸದಾನಂದ ಅವರು ತಮ್ಮ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ
ನೀಡಿದ್ದ ಉಡುಗೊರೆಗಳನ್ನು ಮರಳಿಸುವ ಮೂಲಕ ಪ್ರತಿಭಟಿಸಿದ್ದಾರೆ.

ಆಡಳಿತ ಶಾಖೆಯ ಸೂಪರಿಂಟೆಂಡೆಂಟ್‌ ಅವರ ಮೇಜಿನ ಮೇಲೆ ಸದಾನಂದ ಅವರು ಮೈಸೂರು ಪೇಟ, ಹಾರ ಹಾಗೂ ಶಾಲುಗಳನ್ನು ಇಟ್ಟುಹೋದ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

40 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದ ಸದಾನಂದ 2022ರ ಅ.31ರಂದು ನಿವೃತ್ತರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಆಡಳಿತ ವಿಭಾಗದಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಗಿತ್ತು.

ADVERTISEMENT

‘ಸದಾನಂದ ಅವರು ಪಿಂಚಣಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತ್ವರಿತವಾಗಿ ಮಾಡಿಕೊಡುವಂತೆ ಕೋರಲು 2022ರ ನವೆಂಬರ್‌ನಿಂದ ಪದೇ ಪದೇ ಕಚೇರಿಗೆ ಭೇಟಿ ನೀಡಿದ್ದರು. ಪಿಂಚಣಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸುವ ವಿಚಾರದಲ್ಲಿ ವಿಳಂಬ ಆಗಿರುವುದರಿಂದ ತೀವ್ರ ನೊಂದಿದ್ದರು. ಹೀಗಾಗಿ ಬೇಸರದಿಂದ ಉಡುಗೊರೆಗಳನ್ನು ಮರಳಿಸಿದ್ದಾರೆ‘ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಕಚೇರಿಯ ಮೂಲಗಳು ತಿಳಿಸಿವೆ.

ಸದಾನಂದ ಪ್ರತಿಕ್ರಿಯಿಸಿ, ‘ಚಿಕಿತ್ಸೆ, ಮದುವೆ ಹಾಗೂ ಇತರ ಕಾರಣಗಳಿಗೆ ಮಾಡಿದ ಸಾಲದಿಂದಾಗಿ ನನ್ನ ಮೇಲೆ ಬಹಳ ಆರ್ಥಿಕ ಹೊರೆ ಇದೆ. ಪಿಂಚಣಿ ವಿಳಂಬದಿಂದ ಸಮಸ್ಯೆಯಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.