ಬೆಳ್ತಂಗಡಿ: ಕೋವಿಡ್ –19 ಪ್ರಕರಣ ಹೆಚ್ಚಿರುವ ಕಾರಣ ಸೀಲ್ಡೌನ್ ಮಾಡಿರುವ ಲಾಯಿಲ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ’ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ. ಇದರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಾಯಿಲ ಗ್ರಾಮವನ್ನು ಜೂನ್ 14ರಿಂದ 21ರವರೆಗೆ ಸೀಲ್ಡೌನ್ ಮಾಡಲಾಗಿದೆ. ಗ್ರಾಮದಾದ್ಯಂತ ಜನರು ಮನೆಯಿಂದ ಹೊರಗೆ ಬರದಂತೆ ತಡೆಯಲಾಗಿದೆ. ಇದರ ನಡುವೆ ಲಾಯಿಲ ಪೇಟೆಯ ಸಭಾಭವನವೊಂದರಲ್ಲಿ ಪ್ರತಿದಿನ ಯಕ್ಷಗಾನ ತಾಳಮದ್ದಳೆ ನಡೆಯುತ್ತಿದೆ. ಜೂನ್ 12ರಿಂದ 20ರವರೆಗೆ ಯಕ್ಷಗಾನ ತಾಳಮದ್ದಳೆ ನಡೆಸಲು ಮತ್ತು ಎರಡು ದಿನಗಳ ಯಕ್ಷನೃತ್ಯ ಕಾರ್ಯಕ್ರಮದ ಛಾಯಾಗ್ರಹಣ ಮಾಡಲು ಗ್ರಾಮ ಪಂಚಾಯಿತಿ ಅನುಮತಿ ನೀಡಿದೆ. ‘ಹೊರಗಿನಿಂದ ಯಾರೂ ಬರಲು ಅವಕಾಶವಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವಿರುವಾಗ ಹೊರಗಿನವರು ಬಂದು ಈ ರೀತಿ ಕಾರ್ಯಕ್ರಮ ಮಾಡಲು ಹೇಗೆ ಸಾಧ್ಯ’ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
‘ಯಕ್ಷಗಾನ ಸಪ್ತಾಹ ಕಾರ್ಯಕ್ರಮದ ಚಿತ್ರೀಕರಣ ಮಾತ್ರ ಮಾಡಲಾಗುತ್ತಿದ್ದು ಅದು ಆನ್ಲೈನ್ ಮೂಲಕ ಪ್ರಸಾರವಾಗುತ್ತಿದೆ. ಸೀಲ್ಡೌನ್ಗಿಂತ ಮೊದಲು ಇದಕ್ಕೆ ಅನುಮತಿ ನೀಡಲಾಗಿದ್ದು, ಇಲ್ಲಿ ವೀಕ್ಷಕರಿಗೆ ಅವಕಾಶವಿಲ್ಲ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟಕೃಷ್ಣರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.