ADVERTISEMENT

ಮಂಗಳೂರು: ಪಿಎಫ್‌ಐ ನಂಟು- 14 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 13:05 IST
Last Updated 27 ಸೆಪ್ಟೆಂಬರ್ 2022, 13:05 IST
   

ಮಂಗಳೂರು: ಪಿಎಫ್‌ಐಜೊತೆ ನಂಟು ಹೊಂದಿರುವ 14 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬಂಧಿಸಲಾಗಿದೆ.

ಮಂಗಳೂರು ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ 10 ಮಂದಿಯನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ನಾಲ್ವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಪಿಎಫ್ಐ ಜೊತೆ ನಂಟು ಹೊಂದಿದ್ದ 10 ಮಂದಿಯನ್ನು ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 107 ಹಾಗೂ 151 ಅಡಿ ಬಂಧಿಸಿ ತಾಲ್ಲೂಕು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

ADVERTISEMENT

ಪಾಂಡೇಶ್ವರದ ಮಹಮ್ಮದ್‌ ಶರೀಫ್‌, ಕುದ್ರೋಳಿಯ ಮುಝೈರ್‌ ಮತ್ತು ಮಹಮ್ಮದ್ ನೌಫಾಲ್‌ ಹಂಝ, ತಲಪಾಡಿ ಕೆ.ಸಿ.ನಗರದ ಶಬ್ಬೀರ್‌ ಅಹಮದ್‌, ಉಳ್ಳಾಲ ಮಾಸ್ತಿಕಟ್ಟೆಯ ನವಾಜ್‌ ಉಳ್ಳಾಲ್‌, ಉಳಾಯಿಬೆಟ್ಟುವಿನ ಮಹಮ್ಮದ್‌ ಇಕ್ಬಾಲ್‌, ಕಾಟಿಪಳ್ಳದ ಕೃಷ್ಣಾಪುರ ಚೊಕ್ಕಬೆಟ್ಟುವಿನ ದಾವೂದ್‌ ನೌಷಾದ್‌, ಬಜ್ಪೆ ಕಿನ್ನಿಪದವು ಗ್ರಾಮದ ಇಸ್ಮಾಯಿಲ್ ಎಂಜಿನಿಯರ್‌ ಮತ್ತು ಮಹಮ್ಮದ್‌ ನಜೀರ್, ಮೂಡುಬಿದಿರೆ ಪುತ್ತಿಗೆ ಗ್ರಾಮದ ಮುಂಡೇಲುವಿನ ಇಬ್ರಾಹಿಂ ಬಂಧಿತರು.

ನಗರದ ಪೊಲೀಸರು ಒಟ್ಟು 11 ಮಂದಿಯನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ಒಬ್ಬಾತ ಆನಾರೋಗ್ಯ ಸಮಸ್ಯೆ ಹೊಂದಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನನ್ನು ಬಂಧಿಸಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ಬಿ. ಮೂಡಾದ ರಝಿಕ್‌, ಫಿರೋಜ್‌, ಐಜಾಜ್‌ ಅಹ್ಮದ್‌ ಹಾಗೂ ಅರಿಯಡ್ಕದ ಜಬೀರ್‌ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿ, ತಾಲ್ಲೂಕು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.