ADVERTISEMENT

ಮಂಗಳೂರು: ಪಿ.ಎಂ ಸ್ವನಿಧಿ ಸಾಲ ಮುಂದುವರಿಕೆಗೆ ಒತ್ತಾಯ

ಬೀದಿಬದಿ ವ್ಯಾಪಾರಿಗಳಿಂದ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 4:01 IST
Last Updated 20 ಆಗಸ್ಟ್ 2025, 4:01 IST
<div class="paragraphs"><p>ಮಂಗಳೂರು ಮಹಾನಗರ ಪಾಲಿಕೆ ಎದುರು ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು </p></div>

ಮಂಗಳೂರು ಮಹಾನಗರ ಪಾಲಿಕೆ ಎದುರು ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಸ್ವಾವಲಂಬಿ ಬದುಕಿಗೆ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಪಿ.ಎಂ. ಸ್ವನಿಧಿ ಸಾಲ ಯೋಜನೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಮಂಗಳವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಯಿತು.

ADVERTISEMENT

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ‘ಸ್ವಾಭಿಮಾನದಿಂದ ಬದುಕುವ ಬೀದಿಬದಿ ವ್ಯಾಪಾರಿಗಳ ಬದುಕಿಗೆ ಸಾಲ ಯೋಜನೆ ಆಸರೆಯಾಗಿತ್ತು. ಈ ಯೋಜನೆಯನ್ನು ಸ್ಥಗಿತಗೊಳಿಸಿ ಬೀದಿಬದಿ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಲಾಗಿದೆ. ಪಿಎಂ ಸ್ವನಿಧಿ ಸಾಲ ಯೋಜನೆ ತಡೆಹಿಡಿದಿರುವುದು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗೆ ಸಾಕ್ಷಿಯಾಗಿದೆ’ ಎಂದರು.

ಸಂಘದ ಗೌರವಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ, ‘ಪಿ.ಎಂ. ಸ್ವನಿಧಿ ಕಿರುಸಾಲ ಯೋಜನೆಯಡಿ ದೇಶದಲ್ಲಿ ಮೂರು ಹಂತಗಳಲ್ಲಿ ಒಟ್ಟು ₹9,600 ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ ಶೇ 70ರಷ್ಟು ಮರುಪಾವತಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಿರುಸಾಲ ಯೋಜನೆಗಳಲ್ಲಿ ಅತಿ ಹೆಚ್ಚು ಮರು ಪಾವತಿ ಆಗಿರುವ ಸಾಲ ಯೋಜನೆ ಇದಾಗಿದೆ. ಮಂಗಳೂರು ನಗರದಲ್ಲಿ 8,000ಕ್ಕೂ ಹೆಚ್ಚು ಮಂದಿಗೆ ಸಾಲ ನೀಡಲಾಗಿದೆ. ಗರಿಷ್ಟ ಮಟ್ಟದಲ್ಲಿ ಮರು ಪಾವತಿಯೂ ಆಗಿದೆ’ ಎಂದರು.

ಎರಡು ಮತ್ತು ಮೂರನೇ ಹಂತದ ಸಾಲ ನೀಡಲು ಬ್ಯಾಂಕ್ ಅಧಿಕಾರಿಗಳು ಅನಗತ್ಯ ದಾಖಲೆ ಕೇಳಿ ತೊಂದರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘದ ಪ್ರಮುಖರಾದ ಸಂತೋಷ್ ಆರ್.ಎಸ್, ಮುಜಾಫರ್ ಅಹ್ಮದ್, ಹಂಝ ಮೊಹಮ್ಮದ್, ಸಿಕಂದರ್ ಬೇಗ್, ಎಂ.ಎನ್. ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ವಿಜಯ್ ಜೈನ್, ಸ್ಟ್ಯಾನಿ ಡಿಸೋಜ, ಚೆರಿಯೋನು ಸುರತ್ಕಲ್, ಶಾಲಿನಿ ಬೋಂದೆಲ್, ಸಿದ್ದಮ್ಮ, ಗೀತಾಬಾಯಿ ಇದ್ದರು. ಪಾಲಿಕೆಯ ಉಪ ಆಯುಕ್ತ ಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.