ಮಂಗಳೂರು: ವಾಟ್ಸ್ ಆ್ಯಪ್ ಮೂಲಕ ಪರಿಚಿತಳಾದ ಶಾಲಾ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ವಿವಿಧ ಕಡೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ನಗರದ ಪೋಕ್ಸೊ ನ್ಯಾಯಾಲಯ 20 ವರ್ಷ ಸಜೆ ವಿಧಿಸಿದೆ.
ಬಂಟ್ವಾಳ ತಾಲ್ಲೂಕು ಸಜಿಪ ನಡು ಬಸ್ತಿಗುಡ್ಡದ ಅಬ್ದುಲ್ ಅಜೀದ್ ಅವರ ಮಗ ಮನ್ಸೂರ್ ಯಾನೆ ಮೊಹಮ್ಮದ್ ಮನ್ಸೂರ್ (33) ಶಿಕ್ಷೆಗೆ ಒಳಗಾದಾತ. ಉಳ್ಳಾಲ ತಾಲ್ಲೂಕಿನ ಬಾಲಕಿಯನ್ನು ಪರಿಚಯ ಮಾಡಿಕೊಂಡ ಮನ್ಸೂರ್ 2023ರ ಮೇ 23ರಿಂದ ಮಂಜೇಶ್ವರದ ಗೆಳೆಯನ ಮನೆ ಮತ್ತು ಬಿ.ಸಿ ರೋಡ್ನ ಪರಿಚಿತ ಮಹಿಳೆಯೊಬ್ಬಳ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಬಂಟ್ವಾಳದಲ್ಲಿ ಅತ್ಯಾಚಾರದ ವಿಡಿಯೊ ಶೂಟಿಂಗ್ ಮಾಡಿದ್ದ. ನಂತರ ಅದನ್ನೇ ತೋರಿಸಿ ಹೆದರಿಸಿ ತಿರುಗಾಡಲು ಕರೆದಿದ್ದ. ಅದಕ್ಕೆ ಒಪ್ಪದಿದ್ದಾಗ ಆತ್ಮಹತ್ಯೆ ಮಾಡುವುದಾಗಿ ಹೇಳಿದ್ದ. ನಂತರ ವಿವಿಧ ಕಡೆಗೆ ತಿರುಗಾಡಲು ಕರೆದುಕೊಂಡು ಹೋಗಿದ್ದ.
ಡಿಸೆಂಬರ್ 5ರಂದು ಬಾಲಕಿ ಶಾಲೆಗೆ ಹೋಗದೆ ಕುಳಿತಿದ್ದಾಗ ಪ್ರಶ್ನಿಸಿದ ತಂದೆಗೆ ವಿಷಯ ತಿಳಿಸಿದ್ದಾಳೆ. ಅವರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಸ್ಪೆಕ್ಟರ್ ರಾಜೇಂದ್ರ ಬಿ.ಎನ್ ಅವರು ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಎಫ್ಟಿಎಸ್ಸಿ-2 (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಮಾನು ಕೆ.ಎಸ್ ಶಿಕ್ಷೆ ವಿಧಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ಮತ್ತು ಸರ್ಕಾರಿ ಅಭಿಯೋಜಕ ಬದ್ರಿನಾಥ ಅವರು ಸರ್ಕಾರದ ಪರವಾಗಿ ವಾದಿಸಿದ್ದರು. ಜೈಲುವಾಸ ಮಾತ್ರವಲ್ಲದೆ ₹ 55 ಸಾವಿರ ದಂಡವನ್ನೂ ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.