ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಂತಕರೊಂದಿಗೆ ನೇರ ಸಂಪರ್ಕದಲ್ಲಿದ್ದ ಎನ್ನಲಾದ ಕೇರಳದ ವ್ಯಕ್ತಿಯನ್ನು ದಕ್ಷಿಣ ಕನ್ನಡ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಶಕ್ಕೆ ಪಡೆದ ವ್ಯಕ್ತಿ 20 ವರ್ಷಗಳ ಹಿಂದೆ ಬೆಳ್ಳಾರೆಯ ತಿಂಗಳಾಡಿ ಎಂಬಲ್ಲಿಂದ ಬಂದು ಸೋಂಕಾಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮೂರು ವರ್ಷಗಳ ಹಿಂದೆ ಮಾಲೀಕ ಹಾಗೂ ಕಾರ್ಮಿಕನ ನಡುವೆ ತಕರಾರು ನಡೆದು, ವ್ಯಕ್ತಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಪ್ರಸ್ತುತ ವಶಕ್ಕೆ ಪಡೆದ ವ್ಯಕ್ತಿಯ ಮನೆಯಲ್ಲಿ ಹತ್ಯೆಯ ಪ್ರಮುಖ ಆರೋಪಿ ಎರಡು ದಿನಗಳ ಕಾಲ ವಾಸವಿದ್ದ ಎನ್ನಲಾಗುತ್ತಿದೆ.
ಪ್ರಮುಖ ಆರೋಪಿಗೆ ಆಶ್ರಯ ನೀಡಿದ್ದ ವ್ಯಕ್ತಿ ತಾನು ಸಿಲುಕಿ ಬೀಳದೇ ಇರಲು, ಬೇರೆಯವರ ಫೋನ್ನಿಂದ ಹಂತಕನೊಂದಿಗೆ ಮಾತನಾಡಿದ್ದಾನೆ. ನಂತರ ಫೋನ್ ನಂಬರ್ ಸಿಗದ ರೀತಿಯಲ್ಲಿ ಕಾಲ್ ಚಾಟ್ ಡಿಲೀಟ್ ಮಾಡಿದ್ದಾನೆ. ಪೊಲೀಸರಿಗೆ ಈ ಸುಳಿವು ಸಿಕ್ಕಿದ್ದು, ಆ ವ್ಯಕ್ತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿಯೇ ಆತನನ್ನು ವಶಕ್ಕೆ ಪಡೆದರು ಎಂದು ಮೂಲಗಳು ತಿಳಿಸಿವೆ.
‘ಇಲಾಖೆ ಈಗ ಮತ್ತೆ ಯಾರನ್ನೂ ಬಂಧಿಸಿಲ್ಲ. ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ’ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.