ADVERTISEMENT

ಮಂಗಳೂರು | ಮಾಜಿಸ್ಟಿರಿಯಲ್ ವಿಚಾರಣೆಗೆ ಬಾರದ ಸಾರ್ವಜನಿಕರು

3 ತಿಂಗಳಲ್ಲಿ‌ ಸರ್ಕಾರ,‌ ಮಾನವ ಹಕ್ಕು ಆಯೋಗಕ್ಕೆ‌ ವರದಿ: ಜಗದೀಶ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 6:35 IST
Last Updated 7 ಜನವರಿ 2020, 6:35 IST
ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ನೌಶೀನ್‌ ಅವರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯ ದೃಶ್ಯ (ಚಿತ್ರ: ಪ್ರಜಾವಾಣಿ ಸಂಗ್ರಹ)
ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ನೌಶೀನ್‌ ಅವರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆಯ ದೃಶ್ಯ (ಚಿತ್ರ: ಪ್ರಜಾವಾಣಿ ಸಂಗ್ರಹ)   

ಮಂಗಳೂರು: ಡಿಸೆಂಬರ್‌ 19ರಂದು‌ ನಗರದಲ್ಲಿ‌ ನಡೆದ‌‌ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟಿರಿಯಲ್ ತನಿಖೆಯ ವಿಚಾರಣೆಯನ್ನು‌ ಮಂಗಳವಾರ ನಗರದ ಮಿನಿವಿಧಾನಸೌಧದ ಉಪ ವಿಭಾಗಾಧಿಕಾರಿ‌ ಕಚೇರಿ ಕೋರ್ಟ್ ಹಾಲ್‌ನಲ್ಲಿಆಯೋಜಿಸಲಾಗಿತ್ತು. ಆದರೆ, ಹೇಳಿಕೆ ದಾಖಲಿಸಲು ಯಾರೊಬ್ಬರೂ ಬಾರದಕಾರಣವಿಚಾರಣೆ ನಡೆಸಲು ಬಂದಿದ್ದ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಸುಮ್ಮನೇ ಕುಳಿತುಕೊಳ್ಳುವಂತಾಯಿತು.

ವಿಚಾರಣೆಗೆ ಹಾಜರಾಗುವಂತೆ ಪೊಲೀಸರಿಗೆ‌ ನೋಟಿಸ್ ನೀಡಿರಲಿಲ್ಲ. ಸಾರ್ವಜನಿಕರು, ತೊಂದರೆಗೆ ಒಳಗಾದವರು ತಮ್ಮ‌ಹೇಳಿಕೆಗಳನ್ನು ದಾಖಲಿಸಲು ತಿಳಿಸಲಾಗಿತ್ತು.

ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಸುವುದಾಗಿ ತಿಳಿಸಲಾಗಿತ್ತು.‌ ಅದಾಗ್ಯೂ 11.30 ರವರೆಗೆ ಯಾರೊಬ್ಬರೂ ಬಂದಿರಲಿಲ್ಲ. ಸಹಾಯಕರು ಅನೇಕ ಬಾರಿ ಹೊರಗೆ ತೆರಳಿ‌ ವಿಚಾರಣೆಗೆ ಯಾರಾದರೂ ಬಂದಿದ್ದೀರಾ ಎಂದು‌ ವಿಚಾರಿಸಿದರು. ಯಾರೂ ಬಾರದ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿ ಜಗದೀಶ್ ಅವರು ವಾಸ್ತವಿಕ‌‌ ವಿಚಾರವನ್ನು ದಾಖಲಿಸುವುದರಲ್ಲಿ ತಲ್ಲೀನರಾಗಿದ್ದರು.

ADVERTISEMENT

ಪೊಲೀಸರು, ಮೃತರ ಕುಟುಂಬದವರ ಪ್ರತ್ಯೇಕ ವಿಚಾರಣೆ:ಸುದ್ದಿಗಾರರ ಜತೆ ಮಾತನಾಡಿದ ಜಗದೀಶ್, 19ರ ಗೋಲಿಬಾರ್‌ಗೆ ಸಂಬಂಧಿಸಿದಂತೆ ಸರ್ಕಾರ ಮಾಜಿಸ್ಟಿರೀಯಲ್ ತನಿಖೆಗೆ ಆದೇಶಿಸಿದೆ. ಘಟನಾವಳಿ, ಸನ್ನಿವೇಶಗಳ ತನಿಖೆ‌ ಮಾಡಲು‌ ಸೂಚಿಸಲಾಗಿದೆ. ಸ್ಥಳ ಪರಿಶೀಲಿಸಿದ್ದು, ಘಟನೆಯ ಪ್ರತ್ಯಕ್ಷದರ್ಶಿಗಳು ಸಾರ್ವಜನಿಕರು‌ ಹೇಳಿಕೆ ದಾಖಲಿಸಲು ನೋಟಿಸ್ ನೀಡಲಾಗಿತ್ತು. ನಂತರ ಪೊಲೀಸ್ ವಿಚಾರಣೆ ನಡೆಸಲಾಗುವುದು.‌ ಅದಾದ ನಂತರ‌ ವೈದ್ಯರು, ದಾಖಲೆಗಳನ್ನು ಪರಿಶೀಲಿಸಲಾಗುವುದು. ವರದಿಯನ್ನು 3 ತಿಂಗಳ ಒಳಗೆಸರ್ಕಾರ ಹಾಗೂ ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಪೊಲೀಸರು ಹಾಗೂ ಮೃತರ ಕುಟುಂಬದವರಿಗೆ ಖುದ್ದಾಗಿ ನೋಟಿಸ್ ನೀಡಿ, ಹೇಳಿಕೆ‌ ಪಡೆಯಲಾಗುವುದು. ಆದರೆ, ಮಂಗಳವಾರ ಕೇವಲ ಸಾರ್ವಜನಿಕರ ಹೇಳಿಕೆ ಮಾತ್ರ‌ ದಾಖಲಿಸಲಾಗುತ್ತಿದೆ.‌ ಸಾರ್ವಜನಿಕ ವಿಚಾರಣೆ ಇಂದೇ ಮುಕ್ತಾಯವಾಗುತ್ತದೆ. ಆಸಕ್ತಿ ಇರುವ ‌ಸಾರ್ವಜನಿಕರಿಗೆ ಮತ್ತೊಂದು ಅವಕಾಶ ನೀಡಲಾಗುವುದು ಎಂದರು.

ಪೊಲೀಸ್ ಫೈರಿಂಗ್ ಅಗತ್ಯ ಇತ್ತೇ? ಘಟನೆಗೆ ಕಾರಣ ಏನು ಎಂಬುದನ್ನು ಸುಪ್ರೀಂ‌ಕೋರ್ಟ್ ನ ನಿಯಮಾವಳಿಗಳ‌ ಪ್ರಕಾರ ತನಿಖೆ ನಡೆಸಲಾಗುವುದು ಎಂದು‌ ಹೇಳಿದರು. ಪೊಲೀಸ್ ಹೇಳಿಕೆ, ಸ್ಟೇಷನ್ ಡೈರಿಗಳನ್ನು ಪರಿಶೀಲಿಸಲಾಗುವುದು. ನಂತರ ಅಗತ್ಯ ಬಿದ್ದರೆ, ಸಿಸಿಟಿವಿ ದೃಶ್ಯಾವಳಿ‌ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಾರ್ವಜನಿಕರ‌ ಹೇಳಿಕೆಗಳನ್ನು‌ ವಿಡಿಯೊ ರಿಕಾರ್ಡಿಂಗ್‌ ಮಾಡಲಾಗುವುದು. ಸಾರ್ವಜನಿಕರು‌ ಖುದ್ದಾಗಿ ಬಂದು ಹೇಳಿಕೆ‌ ನೀಡಬೇಕು. ವಕೀಲರ‌ ಮೂಲಕ, ಇ- ಮೇಲ್ ಮೂಲಕ ಹೇಳಿಕೆ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಧ್ಯಾಹ್ನ 1.30 ರವರೆಗೆ ಕಾಯುತ್ತೇನೆ.‌ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಮಾಧ್ಯಮದವರಿಗೆ ಅವಕಾಶವಿಲ್ಲ.‌ ಸಮಯ ಮುಗಿದ ನಂತರ ಎಷ್ಟು ಹೇಳಿಕೆ ದಾಖಲಿಸಲಾಗಿದೆ ಎಂಬುದರ ಮಾಹಿತಿ ನೀಡಲಾಗುವುದು. ಆದರೆ, ಯಾರು ಹೇಳಿಕೆ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.