ಉಳ್ಳಾಲ: ‘ಪ್ರಜಾವಾಣಿ’ ಪತ್ರಿಕೆಯಿಂದ ಸಿಗುವ ಜ್ಞಾನವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಅಂಕ ಪಡೆದು ಜೀವನವನ್ನು ಯಶಸ್ವಿಯಾಗಿಸಿಕೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್ ಹೇಳಿದರು.
ಪಾವೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ‘ಪ್ರಜಾವಾಣಿ’ ಹೊರತಂದಿರುವ ‘ಎಸ್ಎಸ್ಎಲ್ಸಿ ಪರೀಕ್ಷೆ ದಿಕ್ಸೂಚಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಸತ್ಯ ಅಂಶವನ್ನೇ ಪ್ರಕಟಿಸುವ ‘ಪ್ರಜಾವಾಣಿ’ಯ ಬದ್ಧತೆ ಉಲ್ಲೇಖನೀಯ. ಸರ್ವ ಧರ್ಮಕ್ಕೂ ಇರುವ ತಾಕತ್ತು, ಜ್ಞಾನ ಬೇರೆಲ್ಲೂ ಇಲ್ಲ. ಖರ್ಚು ಮಾಡುವ ಹಣದಲ್ಲಿ ₹ 1 ಅನ್ನು ಉಳಿಸಿ ಪತ್ರಿಕೆ ಖರೀದಿಸಿ ಓದಿದಾಗ ಜ್ಞಾನ ವಿಕಸನ ಸಾಧ್ಯ ಎಂದು ಸಂವಿಧಾನಶಿಲ್ಪಿ ಅಂಬೇಡ್ಕರ್ ಹೇಳಿದ್ದರು’ ಎಂದರು.
ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಹಿಂದಿನ ವರ್ಷದಲ್ಲೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪಾವೂರು ಗ್ರಾಮ ಪಂಚಾಯಿತಿ ಎಲ್ಲ ಸದಸ್ಯರ ಬೆಂಬಲದೊಂದಿಗೆ ವಿದ್ಯಾರ್ಥಿಗಳಿಗೆ ಪತ್ರಿಕೆ ವಿತರಿಸಿತ್ತು. ಈ ಬಾರಿಯೂ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು, ಭವಿಷ್ಯ ರೂಪಿಸಲು ಕಾಲೇಜು ಶಿಕ್ಷಣ ಯಶಸ್ವಿಯಾಗಿ ಪೂರೈಸಲು ಸಹಕರಿಸುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪತ್ರಿಕೆ ಸಹಕಾರಿಯಾಗಿರುವುದರಿಂದ ನಿತ್ಯವೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾವೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೆಹರುನ್ನೀಸಾ, ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್, ಸದಸ್ಯರಾದ ವಲೇರಿಯನ್ ಡಿಸೋಜ, ಚೆನ್ನಮ್ಮ, ಪುಷ್ಪಾ ಭಂಡಾರಿ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಮೋನು, ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪ್ರಸರಣ ವಿಭಾಗದ ಸಹಾಯಕ ಪ್ರಬಂಧಕ ನಾಗೇಶ್ ಎಸ್., ಮಂಗಳೂರು ವಿಭಾಗ ಪ್ರಸರಣಾ ಅಧಿಕಾರಿ ಸಂತೋಷ್ ಭಂಡಾರಿ, ತಾಲ್ಲೂಕು ವರದಿಗಾರ ಮೋಹನ್ ಕುತ್ತಾರ್ ಭಾಗವಹಿಸಿದ್ದರು.
ಮುಖ್ಯಶಿಕ್ಷಕಿ ಶರ್ಮಿಳಾ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕಿ ಶಾಲಿನಿ ಡಿಸೋಜ ವಂದಿಸಿದರು.
ಪಾವೂರು ಗ್ರಾಮ ಪಂಚಾಯಿತಿ ವಿವಿಧ ರಂಗಗಳಲ್ಲಿ ಉನ್ನತ ಸಾಧನೆ ಮಾಡಬೇಕು ಎನ್ನುವುದು ಗ್ರಾಮ ಪಂಚಾಯಿತಿಯ ಆಶಯವಾಗಿದೆ, ಉತ್ತಮ ಶಿಕ್ಷಣ, ಒಳ್ಳೆಯ ಅಂಕವನ್ನು ಪಾವೂರು ಶಾಲಾ ವಿದ್ಯಾರ್ಥಿಗಳು ಪಡೆಯಬೇಕು. ಪತ್ರಿಕೆಯನ್ನು ಪೋಷಕರಿಗೂ ಓದಿಸಿ, ವಿದ್ಯಾರ್ಥಿಗಳೂ ಓದಬೇಕು. ಉತ್ತಮ ವಿದ್ಯಾಭ್ಯಾಸದಿಂದ ಉದ್ಯೋಗವಕಾಶಗಳು ಹೆಚ್ಚು ಎಂದು ಪಿಡಿಒ ಕೃಷ್ಣ ಕುಮಾರ್ ಹೇಳಿದರು.
‘ಶಾಲಾ ಜೀವನದಿಂದಲೇ ಪ್ರಜಾವಾಣಿ ಪತ್ರಿಕೆಯನ್ನು ಓದಿ ಬೆಳೆದವರು. ಕಾಲೇಜಿನಲ್ಲಿ ಡೆಕ್ಕನ್ ಹೆರಾಲ್ಡ್ ಓದಿ ಬೆಳೆದಿದ್ದೇವೆ. ಪ್ರತಿ ಅಂಶಗಳನ್ನೂ ಪಾರದರ್ಶಕವಾಗಿ ಪತ್ರಿಕೆ ನೀಡುತ್ತಿರುವುದರಿಂದ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ಓದಿಸುತ್ತಿದ್ದೇವೆ. ಪತ್ರಿಕೆ ಒಳಗೊಂಡಿರುವ ಅಂಶಗಳು ಜೀವನಕ್ಕೆ ಸಹಕಾರಿಯಾಗಿವೆ’ ಎಂದು ಮುಖ್ಯಶಿಕ್ಷಕಿ ಶರ್ಮಿಳಾ ತಿಳಿಸಿದರು.
‘ಪಠ್ಯ ವಿಷಯಗಳ ಮುಖ್ಯ ಅಂಶಗಳು ಪ್ರಜಾವಾಣಿ ಪರೀಕ್ಷೆ ದಿಕ್ಸೂಚಿಯಲ್ಲಿ ಇರುತ್ತವೆ. ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸರ್ವ ಸದಸ್ಯರು ವಿದ್ಯಾರ್ಥಿಗಳಿಗೆ ಪತ್ರಿಕೆ ಕೊಡಿಸಲು ಸಹಕಾರ ನೀಡಿದ್ದಾರೆ. ಪ್ರಜಾವಾಣಿಯು ಪ್ರತಿ ವರ್ಷವೂ ಸ್ಕಾಲರ್ ಶಿಪ್ ನೀಡುತ್ತಿದೆ’ ಎಂದು ಪ್ರಜಾವಾಣಿಯ ಮಂಗಳೂರು ಪ್ರಸರಣಾ ವಿಭಾಗದ ನಾಗೇಶ್ ಎಸ್. ಹೇಳಿದರು.
ಪ್ರಜಾವಾಣಿ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡಿರುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ವಲೇರಿಯನ್ ಡಿಸೋಜ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.