
ಮಂಗಳೂರು: ‘ವಿದ್ಯಾರ್ಥಿಗಳು ಕೇವಲ ವ್ಯವಸ್ಥೆಯ ನಿರ್ವಾಹಕರಾದರೆ ಸಾಲದು; ಭವಿಷ್ಯ ರೂಪಿಸುವ ದೂರದರ್ಶಿಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಂಸ್ಕೃತಿ ಬೆಳೆಸುವ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವ ಅಗತ್ಯವಿದೆ. ಮೌಲ್ಯಾಧಾರಿತ ತಂತ್ರಜ್ಞಾನ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ’ ಎಂದು ಇ–ಬಾಕ್ಸ್ ಎಐ ಪದವಿ ಕಾರ್ಯಕ್ರಮಗಳ ಕುಲಪತಿ ಪ್ರೊ. ಪಿ.ನಾಗಭೂಷಣ್ ಹೇಳಿದರು.
ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್ಜೆಇಸಿ ) 25ನೇ ಪ್ರತಿಷ್ಠಾಪನಾ ದಿನಾಚರಣೆಯಲ್ಲಿ ಅವರು ‘ತಂತ್ರಜ್ಞಾನದ ಮೂಲಕ ಶಿಕ್ಷಣ: ಗುಣಮಟ್ಟದ ತುಡಿತ’ ಕುರಿತು ಗುರುವಾರ ಮಾತನಾಡಿದರು.
‘ಇಂದಿನ ವಿದ್ಯಾರ್ಥಿಗಳು ಅಂಕ ಗಳಿಸುವುದಕ್ಕೆ ಹೆಚ್ಚು ಗಮನ ನೀಡುತ್ತಿದ್ದಾರೆ. ಜ್ಞಾನವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಪರೀಕ್ಷೆಗಾಗಿ ಪಠ್ಯ ಕಂಠಪಾಠ ಮಾಡುವುದಕ್ಕಿಂತ ಪ್ರಶ್ನಿಸುವಿಕೆ, ಅನ್ವೇಷಣೆ ಮತ್ತು ಜ್ಞಾನಾರ್ಜನೆಗೆ ಒತ್ತು ನೀಡಬೇಕಿದೆ’ ಎಂದರು.
‘ಮಕ್ಕಳ ಆಸಕ್ತಿ ಮತ್ತು ಸಾಮರ್ಥ್ಯವನ್ನು ಪರಿಗಣಿಸದಯೇ ಎಂಜಿನಿಯರಿಂಗ್ ಶಿಕ್ಷಣ ಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ಪೋಷಕರ ಈ ಮನೋಭಾವ ಕಳವಳಕಾರಿ’ ಎಂದರು.
ಕಾಲೇಜಿನ 25 ವರ್ಷಗಳ ಸಾಧನೆ ಬಿಂಬಿಸುವ ವೀಡಿಯೊ ಪ್ರದರ್ಶಿಸಲಾಯಿತು. ಸಂಸ್ಥೆಯ ಬೆಳವಣಿಗೆ ಹಾಗೂ ಸಮಾಜಮುಖಿ ಶೈಕ್ಷಣಿಕ ಗುರಿಗಳನ್ನು ಪ್ರಾಂಶುಪಾಲ ರಿಯೋ ಡಿಸೋಜ ವಿವರಿಸಿದರು. ಕಾಲೇಜಿನ ಶೈಕ್ಷಣಿಕ, ಸಂಶೋಧನಾ ಹಾಗೂ ಸಾಮಾಜಿಕ ಸಾಧನೆಗಳನ್ನು ದಾಖಲಿಸುವ ಸಂಗ್ರಹ ಗ್ರಂಥವನ್ನು ಬಿಡುಗಡೆ ಮಾಡಲಾಯಿತು. ಪ್ರತಿಷ್ಠಾಪನಾ ದಿನದ ಅಂಗವಾಗಿ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠ ಸಾಧನೆ ಮಾಡಿದ ಅಧ್ಯಾಪಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಂಸ್ಥೆಯ ನಿರ್ದೇಶಕ ಫಾ. ವಿಲ್ಫ್ರೆಡ್ ಪಿ ಡಿಸೋಜ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.
ಶಕೀಲಾ ಬಿ ಹಾಗೂ ಸಂಯೋಜಕರಾದ ಸೌಮ್ಯಾ ವೈ.ಎಂ. ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.