ಮಂಗಳೂರು: ‘ಸಮಗ್ರ ಕರಾವಳಿ ಮತ್ತು ಮೀನುಗಾರಿಕೆ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಬುಧವಾರ ಇಲ್ಲಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ಮೀನುಗಾರ ಮುಖಂಡರು ಹಾಗೂ ಪಾಲುದಾರಿಕೆ ಸಂಸ್ಥೆಗಳು ಮತ್ತು ಇಲಾಖೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೀನುಗಾರಿಕಾ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಮಹಾವಿದ್ಯಾಲಯದ ಡೀನ್ ಡಾ. ಎ.ಸೆಂಥಿಲ್ ವೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
ಪ್ರಾಧಿಕಾರದಲ್ಲಿ ಜಿಲ್ಲಾಧಿಕಾರಿ, ಎನ್ಎಂಪಿಟಿ ಅಧ್ಯಕ್ಷರು, ಬಂದರು ಮಂಡಳಿ ಅಧ್ಯಕ್ಷರು, ಪರಿಸರ (ಸಿಆರ್ಝೆಡ್) ಇಲಾಖೆ ಕಾರ್ಯದರ್ಶಿ, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರು, ಮೀನುಗಾರಿಕಾ ಮಹಾವಿದ್ಯಾಲಯದ ಡೀನ್, ಅರಣ್ಯ ಇಲಾಖೆ ನಿರ್ದೇಶಕರು ಹಾಗೂ ಮೀನುಗಾರ ನಾಮನಿರ್ದೇಶಿತ ಸದಸ್ಯರು ಇರಲಿದ್ದಾರೆ.
‘ಸಮುದ್ರದಿಂದ ಮೀನುಗಾರಿಕಾ ಧಕ್ಕೆಗೆ ಬರುವ ಕಾಲುವೆ ಡ್ರೆಜ್ಜಿಂಗ್, ವಾರ್ಫ್ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣ, ಬೃಹತ್ ಬಂದರುಗಳು ಹಾಗೂ ಮೀನುಗಾರರ ನಡುವಿನ ಗೊಂದಲ ಬಗೆಹರಿಸುವುದು, ಮೀನು–ಚಿಪ್ಪು ಸಂತಾನೋತ್ಪತ್ತಿಗೆ ಕ್ರಮ, ರೈತರ ಮಾದರಿಯಲ್ಲಿ ಮೀನುಗಾರರ ಪರಿಗಣನೆ–ಸೌಲಭ್ಯ, ದಾಸ್ತಾನು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು’ ಎಂಬಿತ್ಯಾದಿ ಬೇಡಿಕೆಗಳನ್ನು ಮೀನುಗಾರರು ಮಂಡಿಸಿದರು. ತಾಂತ್ರಿಕ ಹಾಗೂ ಕಾನೂನಾತ್ಮಕ ವಿಚಾರಗಳನ್ನು ಅಧಿಕಾರಿಗಳು ಮುಂದಿಟ್ಟರು.
ಮಂಗಳೂರಿನಲ್ಲಿ ‘ಮೀನುಗಾರಿಕಾ ವಿಶ್ವವಿದ್ಯಾಲಯ’ ಸ್ಥಾಪನೆ ಕುರಿತ ಪ್ರಸ್ತಾವದ ಬಗ್ಗೆ ಇದೇ 21ರಂದು ನಡೆಯಲಿರುವ ವಿಶ್ವ ಮೀನುಗಾರಿಕಾ ದಿನದಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಬಹುದು ಎಂಬ ನಿರೀಕ್ಷೆಯು ಸಭೆಯಲ್ಲಿ ವ್ಯಕ್ತವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.