
ಸುಬ್ರಹ್ಮಣ್ಯ: ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸುಬ್ರಹ್ಮಣ್ಯ ವಲಯ ಅರಣ್ಯ ಕಚೇರಿಯ ಎದುರು ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ ನಡೆಯಿತು.
ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಿ, ‘ಪರಿಭಾವಿತ ಅರಣ್ಯದಡಿ ಬರುವ ಸರ್ವೆ ನಂಬರ್ನಲ್ಲಿರುವ ಸಾರ್ವಜನಿಕ ಕಟ್ಟಡಗಳು ಹಾಗೂ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಬಿಟ್ಟುಕೊಡಬೇಕು. ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶದ ಅರಣ್ಯದಂಚಿನಲ್ಲಿ ಕೂಡಲೇ ಗಡಿ ಗುರುತು ಮಾಡಬೇಕು, ಅಲ್ಲದೆ ಆನೆ ದಾಳಿ ಆಗದಂತೆ ಸೋಲಾರ್ ಬೇಲಿಯನ್ನ ನಿರ್ಮಿಸಬೇಕು’ ಎಂದರು.
ಈಗಾಗಲೇ ಅಕ್ರಮ ಸಕ್ರಮ ಯೋಜನೆಯಡಿ ಅರಣ್ಯದಂಚಿನಲ್ಲಿರುವ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು, ಅದನ್ನು ಅನೂರ್ಜಿತಗೊಳಿಸಲು ಹೊರಟಿರುವ ಅರಣ್ಯ ಇಲಾಖೆ ನಡೆ ಖಂಡನೀಯ. ಅರಣ್ಯ– ಕಂದಾಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಕಡಬ ತಾಲ್ಲೂಕು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ, ‘ಕಸ್ತೂರಿ ರಂಗನ್ ವರದಿಯನ್ನು ಕರಾವಳಿ ಭಾಗದ ನಾವೆಲ್ಲರೂ ಒಗ್ಗಟ್ಟಿನಿಂದ ವಿರೋಧಿಸುತ್ತಿದ್ದೇವೆ’ ಎಂದರು. ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಗೌರವ ಸಲಹೆಗಾರ ಅಶೋಕ್ ಕುಮಾರ್ ಮೂಲೆ ಮಜಲು ಮಾತನಾಡಿದರು. ಚಂದ್ರಶೇಖರ ಬಾಳುಗೋಡು ಸ್ವಾಗತಿಸಿದರು. ಅಚ್ತ್ಯುತ ಗೌಡ ನಿರೂಪಿಸಿದರು. ಹರಿಪ್ರಸಾದ್ ಕಳಿಗೆ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.