ಸುಬ್ರಹ್ಮಣ್ಯ: ಸುಳ್ಯ ತಾಲ್ಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ಆರಂಭಿಸಬಾರದು ಎಂದು ಒತ್ತಾಯಿಸಿ ಮಂಗಳವಾರ ಹರಿಹರ ಪೇಟೆಯಲ್ಲಿ ನಡೆಯಿತು.
ಮದ್ಯ ಮುಕ್ತ ಗ್ರಾಮ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಒಟ್ಟಾಗಿ ಪೇಟೆಯಿಂದ ಗ್ರಾಮ ಪಂಚಾಯಿತಿವರೆಗೆ ಜಾಥ ನಡೆಸಿದರು. ಬಳಿಕ ಮಂಗಳೂರು ಅಬಕಾರಿ ಆಯುಕ್ತರಿಗೆ ಗ್ರಾಮ ಪಂಚಾಯಿತಿ ಮೂಲಕ ಮನವಿ ಸಲ್ಲಿಸಿದರು.
ಸಾರ್ವಜನಿಕ ವಿರೋಧದ ಕಾರಣಕ್ಕೆ ಹರಿಹರ ಪಲ್ಲತ್ತಡ್ಕದಲ್ಲಿ 1994ರಿಂದಲೇ ಮದ್ಯದಂಗಡಿ ಇಲ್ಲ. ಈಗ ಬೇರೆಡೆಯಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ಅನ್ನು ಹರಿಹರ ಪಲ್ಲತ್ತಡ್ಕಕ್ಕೆ ಸ್ಥಳಾಂತರಿಸಲು ಪ್ರಯತ್ನ ನಡೆಯುತ್ತಿದೆ. ಸುಳ್ಯ ಅಬಕಾರಿ ಇಲಾಖೆಯವರು ಇಲ್ಲಿಗೆ ಬಂದು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಹಜರು ಮಾಡಿದ್ದಾರೆ. ಗ್ರಾಮದ ಹಾಗೂ ಸುತ್ತಲಿನ 5 ಗ್ರಾಮಗಳಜನರು ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮದ್ಯ ಮುಕ್ತ ಗ್ರಾಮ ಸಮಿತಿ ಗೌರವಾಧ್ಯಕ್ಷ ದುರ್ಗಾದಾಸ್ ಮಲ್ಲಾರ, ಅಧ್ಯಕ್ಷ ಹಿಮ್ಮತ್ ಕಿರಿಭಾಗ, ಜನ ಜಾಗೃತಿ ವೇದಿಕೆ ಸುಳ್ಯದ ಮಾದವ ಚಾಂತಾಳ, ಸತೀಶ್ ಕೆರೆಕ್ಕೋಡಿ, ವಿನುಪ್ ಮಲ್ಲಾರ, ನವ ಜೀವನ ಸಮಿತಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಸದಸ್ಯರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.