ಮಂಗಳೂರು: ಪದವಿಪೂರ್ವ ಕಾಲೇಜುಗಳ ನೌಕರರ ಸಹಕಾರ ಸಂಘವು 2023-24ನೇ ಸಾಲಿನಲ್ಲಿ ಶೇ 10ರಷ್ಟು ಡಿವಿಡೆಂಡ್ ಘೋಷಿಸಿದೆ.
ನಂತೂರಿನ ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎನ್.ದುಗ್ಗಪ್ಪ, ‘ಆರು ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘವು ಸರ್ಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢ, ಪದವಿಪೂರ್ವ ಹಾಗೂ ಪದವಿ ಕಾಲೇಜುಗಳ ಶಿಕ್ಷಕ ಮತ್ತು -ಶಿಕ್ಷಕೇತರರು ಸೇರಿದಂತೆ 1,500 ಸದಸ್ಯರನ್ನು ಹೊಂದಿದೆ. ಆರೋಗ್ಯಪೂರ್ಣ ಬೆಳವಣಿಗೆಯನ್ನು ಕಾಣುತ್ತಿದೆ’ ಎಂದರು.
‘ಕಳೆದ ಸಾಲಿನಲ್ಲಿ ಸುಮಾರು ₹7 ಕೋಟಿ ಸಾಲ ನೀಡಲಾಗಿದೆ. ಆರು ವರ್ಷಗಳಲ್ಲಿ ಒಟ್ಟು ₹30 ಕೋಟಿ ವ್ಯವಹಾರ ವೃದ್ಧಿ ಆಗಿದೆ. ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ಪುತ್ತೂರು ಮತ್ತು ಕಡಬಗಳಲ್ಲಿ ಶಾಖೆಗಳನ್ನು ಹೊಂದಿದೆ. ಮುಂದಿನ ವರ್ಷಗಳಲ್ಲಿ ಮೂಡುಬಿದಿರೆ ಮತ್ತು ತೊಕ್ಕೊಟ್ಟಿನಲ್ಲಿ ಶಾಖೆಗಳನ್ನು ತೆರೆಯುವ ಯೋಜನೆ ಇದೆ’ ಎಂದರು.
ಕಾರ್ಯ ನಿರ್ವಹಣಾ ಅಧಿಕಾರಿ ರವೀಂದ್ರ ಆಳ್ವ ವಾರ್ಷಿಕ ವರದಿಯನ್ನು ಮಂಡಿಸಿದರು. ಪ್ರಾಂಶುಪಾಲರಾಗಿ ನಿವೃತ್ತರಾದ ಗಂಗಾಧರ ಆಳ್ವ, ಶ್ರೀಕೃಷ್ಣ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಉಮೇಶ್ ಕರ್ಕೆರ ಮತ್ತು ಯೂಸುಫ್ ಲೆಕ್ಕಪತ್ರಗಳನ್ನು ಮಂಡಿಸಿದರು. ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಜಯಾನಂದ ಸುವರ್ಣ ನಿರ್ದೇಶಕರಾದ ವಿಠಲ. ಎ, ಶೇಖರ್ ರೈ, ಸಂಧ್ಯಾ ಕುಮಾರಿ, ನವೀನ್ ಕುಮಾರ್, ಕಿಶೋರ್ ಕುಮಾರ್ ಮತ್ತು ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಹಾಗೂ ಸಂಘದ ನಿರ್ದೇಶಕರಾದ ಡಾ. ನವೀನ್ ಶೆಟ್ಟಿ ಧನ್ಯವಾದ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.