ಮಂಗಳೂರು: ನಗರದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿರುವ 70 ವರ್ಷಗಳಷ್ಟು ಹಳೆಯದಾದ ಡಾನ್ ಬಾಸ್ಕೊ ಸಭಾಂಗಣದ ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಇದಕ್ಕಾಗಿ ದೇಣಿಗೆ ಸಂಗ್ರಹಿಸಲು ‘ಪುಂಡಿ ಪಣವು ಹುಂಡಿ’ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೊಂಕಣಿ ನಾಟಕ ಸಭಾ ಅಧ್ಯಕ್ಷ ಡಾ.ಪಾವ್ಲ್ ಮೆಲ್ವಿನ್ ಡಿಸೋಜ, ‘ಆರಂಭದಲ್ಲಿ ಇಡೀ ಕಟ್ಟಡವನ್ನು ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಿಸುವ ಯೋಚನೆ ಇತ್ತು. ಆದರೆ, ಈ ಕಟ್ಟಡದ 70 ವರ್ಷಗಳ ಇತಿಹಾಸವನ್ನು ಉಳಿಸುವ ದೃಷ್ಟಿಯಿಂದ ಇರುವ ಕಟ್ಟಡವನ್ನು ನವೀಕರಿಸಲು ನಿರ್ಧರಿಸಲಾಯಿತು. ನವೀಕರಣ ಕಾಮಗಾರಿ ₹2 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಡಿಸೆಂಬರ್ ವೇಳೆಗೆ ಪೂರ್ಣವಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ನಡ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ‘ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವುದು ಸುಲಭ. ಆದರೆ, ಹಳೆಯ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೊಂಕಣಿ ನಾಟಕ ಸಭಾ ಕೈಗೊಂಡಿರುವ ತೀರ್ಮಾನ ಶ್ಲಾಘನೀಯ’ ಎಂದರು.
ವಾಣಿಜ್ಯೀಕರಣ ಹೆಚ್ಚಾದಂತೆ ರಾಜ್ಯದಲ್ಲಿ ಸುಮಾರು 650 ರಿಂದ 1 ಸಾವಿರ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಇನ್ನೂ ಹಲವು ಚಿತ್ರಮಂದಿರಗಳು ಇದೇ ಹಾದಿಯಲ್ಲಿವೆ ಎಂದರು.
ತುಳು ಚಲನಚಿತ್ರ ನಟ, ನಿರ್ದೇಶಕ ದೇವಿದಾಸ್ ಕಾಪಿಕಾಡ್, ಡಾನ್ ಬಾಸ್ಕೊ ಹಾಲ್ಗೆ ತನ್ನದೇ
ಆದ ಇತಿಹಾಸವಿದೆ. ಕೆ.ಎನ್. ಟೈಲರ್ ಅವರ ‘ರಂಗಮಂದಿರ’ ನಾಟಕ ವೀಕ್ಷಿಸಲು ಕನ್ನಡ ಚಿತ್ರರಂಗ ಮೇರು ನಟ ರಾಜ್ಕುಮಾರ್ ಅವರು
ಇಲ್ಲಿಗೆ ಬಂದಿದ್ದರು ಎಂದು ನೆನಪಿಸಿಕೊಂಡರು.
ತುಳು ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್, ತಮ್ಮ ಲಕ್ಷ್ಮಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸುದರ್ಶನ ಮಾತನಾಡಿದರು.
ಕೊಂಕಣಿ ನಾಟಕ ಸಭಾ ಉಪಾಧ್ಯಕ್ಷ ಲಿಸ್ಟನ್ ಡಿಸೋಜ, ಕಿಶೋರ್ ಡಿ. ಶೆಟ್ಟಿ, ಹ್ಯಾರಿ ಫರ್ನಾಂಡಿಸ್, ಡಾಲ್ಫಿನ್ ಸಲ್ಡಾನ, ಮುರಳೀಧರ ಕಾಮತ್, ರೇಮಂಡ ಡಿಕುನ್ಹ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.