ADVERTISEMENT

ಪುತ್ತೂರು ದಸರಾ ಮಹೋತ್ಸವ ಸಂಪನ್ನ

ಶಾರದೆ, ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳ ವೈಭವದ ಶೋಭಾಯಾತ್ರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 7:00 IST
Last Updated 8 ಅಕ್ಟೋಬರ್ 2022, 7:00 IST
ಸಂಪ್ಯ ಉದಯಗಿರಿ ವಿಷ್ಣುಮೂರ್ತಿ -ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆರಾಧಿಸಿದ ಶಾರದೆ, ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳ ಶೋಭಾಯಾತ್ರೆಯನ್ನು ಪುತ್ತೂರು ದಸರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉದ್ಘಾಟಿಸಿದರು.
ಸಂಪ್ಯ ಉದಯಗಿರಿ ವಿಷ್ಣುಮೂರ್ತಿ -ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಆರಾಧಿಸಿದ ಶಾರದೆ, ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳ ಶೋಭಾಯಾತ್ರೆಯನ್ನು ಪುತ್ತೂರು ದಸರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉದ್ಘಾಟಿಸಿದರು.   

ಪುತ್ತೂರು: ಪುತ್ತೂರು ನವದುರ್ಗಾ ರಾಧನಾ ಸಮಿತಿ ವತಿಯಿಂದ 11 ದಿನಗಳಿಂದ ಆರ್ಯಾಪು ಗ್ರಾಮದ ಸಂಪ್ಯ ಉದಯಗಿರಿ ವಿಷ್ಣುಮೂರ್ತಿ -ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಪುತ್ತೂರು ದಸರಾ ಮಹೋತ್ಸವ ಶುಕ್ರವಾರ ಸಂಜೆ ಸಂಪನ್ನಗೊಂಡಿತು.

ಕ್ಷೇತ್ರದಲ್ಲಿ ಆರಾಧಿಸಿದ ಶಾರದೆ, ಗಣಪತಿ ಸಹಿತ ನವದುರ್ಗೆಯರ ವಿಗ್ರಹಗಳ ವಿಜೃಂಭಣೆಯ ಶೋಭಾ ಯಾತ್ರೆ ಶುಕ್ರವಾರ ಸಂಜೆ ನಡೆಯಿತು.

ಬೆಳಿಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದರ್ಬೆ ಅಶ್ವಿನಿ ವೃತ್ತದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಸಂಪ್ಯ ಉದಯಗಿರಿಯಿಂದ ಆರಂಭಗೊಂಡು ಮಾಣಿ-ಮೈಸೂರು ಹೆದ್ದಾರಿಯಾಗಿ, ನಗರದ ಮುಖ್ಯ ರಸ್ತೆಯ ಮೂಲಕ ಬೊಳುವಾರು ತನಕ ನಡೆಯಿತು.

ADVERTISEMENT

ಪುತ್ತೂರು ದಸರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ ಸುರೇಶ್ ಪುತ್ತೂರಾಯ ಮತ್ತು ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

ದಸರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಮಹೇಶ್ ಕಜೆ, ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಸತೀಶ್ ನಾಯ್ಕ್‌ ಪರ್ಲಡ್ಕ, ಸಂಚಾಲಕ ಪ್ರೀತಂ ಪುತ್ತೂರಾಯ, ರಾಜೇಶ್ ಬನ್ನೂರು, ನಯನಾ ರೈ, ಲೋಕೇಶ್ ಹೆಗ್ಡೆ, ಮಹಾಬಲ ರೈ ವಳತ್ತಡ್ಕ ಇದ್ದರು.

ಸಂಪ್ಯದ ಉದಯಗಿರಿಯಿಂದ ಬೊಳುವಾರು ತನಕ ಸಾಗಿದ ಶೋಭಾಯಾತ್ರೆಯಲ್ಲಿ ಚೆಂಡೆವಾದನ, ಬ್ಯಾಂಡ್-ವಾಲಗ, ಚಲಿಸುವ ಸಂಗೀತ ರಸಮಂಜರಿ, ಸಿಂಹ ನೃತ್ಯ, ತೊಟ್ಟಿಲಿನಲ್ಲಿ ಕುಳಿತ ದುರ್ಗೆಯರ ಸ್ತಬ್ಧಚಿತ್ರ ವಿಶೇಷ ಆಕರ್ಷಣೆಗಳಾಗಿತ್ತು.

ಬೊಳುವಾರಿನಿಂದ ಹಿಂತಿರುಗಿದ ಶೋಭಾಯಾತ್ರೆಯು ಪುತ್ತೂರು ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಗೆ ಬಂದು, ಅಲ್ಲಿನ ಕೆರೆಯಲ್ಲಿ ವಿಗ್ರಹಗಳನ್ನು ಜಲಸ್ತಂಭನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.