ಪುತ್ತೂರು: ಬುದ್ಧಿವಂತರ ಜಿಲ್ಲೆಯ ಜನರನ್ನು ದಡ್ಡರನ್ನಾಗಿಸುವ ಕೆಲಸ ನಡೆಯುತ್ತಿದೆ, ದೇಶಾಭಿಮಾನದ ಹೆಸರಿನಲ್ಲಿ ದ್ವೇಷಾಭಿಮಾನ ತುಂಬಿಸಲಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಅಂಬೇಡ್ಕರ್ ವಾದದ ಅನುಷ್ಠಾನವೇ ಎಲ್ಲಾ ಸವಾಲುಗಳಿಗೆ ಉತ್ತರವಾಗುತ್ತದೆ ಎಂದು ಲೇಖಕ, ಪ್ರೊ.ಲಕ್ಷೀಪತಿ ಸಿ. ಜಿ ಹೇಳಿದರು.
ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯಲ್ಲಿ ನಡೆದ ‘ಅಂಬೇಡ್ಕರ್ ವಾದದ ಆಚರಣೆ’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಕಲಿ ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಹಾಗೂ ಸಂವಿಧಾನದ ಬಗ್ಗೆ ಅಭಿಮಾನ ದೂರ ಮಾಡುವ ಷಡ್ಯಂತ್ರದಲ್ಲಿ ಮನುವಾದಿಗಳು ತೊಡಗಿಕೊಂಡಿದ್ದು, ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಸಮಾಜವನ್ನು ಅರ್ಥಮಾಡಿಕೊಳ್ಳುವಂತಹ ಶಿಕ್ಷಣ ನಮಗೆ ಬೇಕಾಗಿದೆ. ವಿದ್ಯಾರ್ಥಿಗಳಲ್ಲಿ ಅಂಬೇಡ್ಕರ್ ವಾದದ ಆಶಯಗಳನ್ನು ಬಿತ್ತುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಿದೆ ಎಂದರು.
ಕೃಷ್ಣಪ್ಪ ಸ್ಥಾಪಿತ ದಲಿತ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ದೇವದಾಸ್ ಎಂ. ಮಾತನಾಡಿ, ಅಂಬೇಡ್ಕರ್ ವಿಚಾರ ಧಾರೆಗಳಿಗೆ ಪ್ರಾಮುಖ್ಯತೆ ನೀಡದೆ ಸಾಮಾಜಿಕ ಅಭಿವೃದ್ಧಿ ಅಸಾಧ್ಯ. ಆತ್ಮಾಭಿಮಾನ ಮತ್ತು ಸ್ವಾಭಿಮಾನದ ಬದುಕಿಗಾಗಿ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ವಿಠಲ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಕಿರಣ್ ಕುಮಾರ್, ಪುತ್ತೂರು ಬೌದ್ಧ ಮಹಾಸಭಾದ ಅಧ್ಯಕ್ಷ ಪ್ರೊ.ಗಣೇಶ್ ಕಾರೆಕ್ಕಾಡ್ ಇದ್ದರು. ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಕ್ಷಾ, ರಶ್ಮಿ ಮತ್ತು ಮೇಘನಾ ‘ಅಂಬೇಡ್ಕರ್ ವಾದದ ಆಚರಣೆ’ ಕೃತಿ ಪರಿಚಯಿಸಿದರು. ಉಪನ್ಯಾಸಕ ಪ್ರೊ. ಭಾಸ್ಕರ್ ವಿಟ್ಲ ನಿರೂಪಿಸಿದರು.
‘ಅನುಯಾಯಿ ಎನ್ನಲು ಹಿಂಜರಿಕೆ’ ಅಂಬೇಡ್ಕರ್ ಅನುಯಾಯಿ ಎನ್ನಲು ಹಲವರಲ್ಲಿ ಹಿಂಜರಿಕೆ ಇದೆ. ಇದು ನಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ. ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಅಸ್ಪ್ರಶ್ಯತೆ ಜಾತಿ ಪದ್ಧತಿ ತಾರತಮ್ಯದ ಬಗ್ಗೆ ಹೋರಾಟ ತೀವ್ರವಾಗಲು ನಮ್ಮ ಮಕ್ಕಳಿಗೆ ಅಂಬೇಡ್ಕರ್ ವಾದವನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.