ಮಂಗಳೂರು: ಜಿಲ್ಲೆಯಲ್ಲಿ ಮರಳು ತೆಗೆಯುವ ಕಾರ್ಯ ಆರಂಭಿಸಲು ಅಗತ್ಯ ಪ್ರಕ್ರಿಯೆ ನಡೆಯುತ್ತಿದ್ದು, ನಾನ್ ಸಿಆರ್ಝಡ್ ಪ್ರದೇಶದ ಮರಳು ಸದ್ಯದಲ್ಲಿ ಲಭ್ಯವಾಗಿ, ಸಮಸ್ಯೆ ನಿವಾರಣೆಯಾಗಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನ್ ಸಿಆರ್ಝಡ್ ಪ್ರದೇಶದಲ್ಲಿ ಮರಳು ತೆಗೆಯಲು 25 ಟೆಂಡರ್ದಾರರನ್ನು ಗುರುತಿಸಲಾಗಿದೆ. ಮರಳು ತೆಗೆಯುವ ಪ್ರಕ್ರಿಯೆ ಪ್ರಾರಂಭಿಸುವ ಪೂರ್ವದಲ್ಲಿ ಸ್ಟಾಕ್ಯಾರ್ಡ್ನಲ್ಲಿ ವೇ ಬ್ರಿಡ್ಜ್ ಸ್ಥಾಪಿಸಲು ಅವರಿಗೆ ಅಕ್ಟೋಬರ್ 15ರ ಗಡುವು ನೀಡಲಾಗಿತ್ತು. ಆದರೆ, ಇದು ಇನ್ನೂ ಅನುಷ್ಠಾನವಾಗದ ಕಾರಣ, ಇನ್ನೂ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ವೇ ಬ್ರಿಡ್ಜ್ ಅಳವಡಿಸಿದ ಕೂಡಲೇ ಅನುಮತಿ ನೀಡಲಾಗುತ್ತದೆ. ಅಗತ್ಯವಿದ್ದಲ್ಲಿ ಹೆಚ್ಚಿನ ಬ್ಲಾಕ್ಗಳನ್ನು ಗುರುತಿಸಲು ಯೋಚಿಸಲಾಗುವುದು. ನಾನ್ ಸಿಆರ್ಝಡ್ ಪ್ರದೇಶದಲ್ಲಿ ಜೂನ್ನಿಂದ ಅಕ್ಟೋಬರ್ 15ರವರೆಗೆ ಮರಳು ತೆಗೆಯಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಜಿಲ್ಲಾಡಳಿತವು ಸುರತ್ಕಲ್ ಎನ್ಐಟಿಕೆ ತಜ್ಞರ ಸಹಾಯದಿಂದ ಸರ್ವೆ ನಡೆಸಿ, ಅನುಮತಿಗಾಗಿ ಕರ್ನಾಟಕ ರಾಜ್ಯ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದೆ. ರಾಜ್ಯ ವಲಯದಿಂದ ಇದಕ್ಕೆ ಅನುಮತಿ ದೊರೆಯಬೇಕಾಗಿದೆ. 2019ರ ಸಿಆರ್ಝಡ್ ಅಧಿಸೂಚನೆ ಅನ್ವಯ ಹೊಸ ನಿಯಮ ಪಾಲನೆಯಾಗಬೇಕಾಗಿರುವ ಕಾರಣ ವಿಳಂಬವಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಅಕ್ರಮ ಮರಳು ದಂಧೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪಂಚಾಯತ್ರಾಜ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡಗಳು ಅಕ್ರಮ ಮರಳು ಗಣಿಗಾರಿಕೆ ನಡೆಯುವ ಮಾಹಿತಿ ದೊರೆತಲ್ಲಿ, ದಾಳಿ ನಡೆಸುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.