ಕೋರ: ಹೋಬಳಿಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನಜಾವದವರೆಗೆ ಉತ್ತಮ ಮಳೆ ಸುರಿದಿದ್ದು ಹಳ್ಳಗಳು ಹರಿದು ಕೆರೆ, ಕಟ್ಟೆಗಳಿಗೆ ನೀರು ಬಂದಿದೆ.
ಮಳೆಗಾಲ ಆರಂಭವಾದಾಗಿನಿಂದ ತುಂತುರು ಹನಿಗೆ ಬೇಸಾಯ ಮಾಡಲಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೂ ಸುರಿದ ಮಳೆ ಈ ವರ್ಷದಲ್ಲಿ ಸುರಿದ ಅತ್ಯುತ್ತಮ ಮಳೆ. ಇನ್ನೆರಡು ದಿನ ಹೀಗೆ ಮಳೆ ಸುರಿದರೆ ಕೆರೆ ಕಟ್ಟೆಗಳಿಗೆ ಯಥೇಚ್ಛ ನೀರು ಹರಿದು ಬರುತ್ತದೆ. ಮಳೆಯಿಂದ ಬೆಳೆ ಹಾಳಾದರೂ ಪರವಾಗಿಲ್ಲ ಮಳೆ ಬಂದರೆ ಸಾಕು. ಬೋರ್ವೆಲ್ ಕೊರೆಯಿಸುವ ದುಡ್ಡು ಉಳಿಯುತ್ತದೆ ಎಂಬುದು ರೈತರ ಅಭಿಪ್ರಾಯ.
ಹೋಬಳಿಯ ಬ್ರಹ್ಮಸಂದ್ರ, ಕೋರ, ಚಿಕ್ಕತೊಟ್ಲುಕೆರೆ, ಹಿರೇತೊಟ್ಲುಕೆರೆ, ದೇವಲಾಪುರ, ಬೆಳಧರ, ಕೆಸ್ತೂರು, ಭಾಗದಲ್ಲಿ ಉತ್ತಮ ಮಳೆಯಾಗಿದೆ, ಕೆಸ್ತೂರು ಭಾಗದಲ್ಲಿ ಹಳ್ಳಗಳು ಹರಿದು ಕೆರೆಯ ಗುಂಡಿಗಳಿಗೆ ನೀರು ಬಂದಿವೆ, ಚಿಕ್ಕತೊಟ್ಲುಕೆರೆಯ ಹಿಂಭಾಗದ ಗದ್ದೆ ಬಯಲಲ್ಲಿ ಬೆಳೆದಿರುವ ರಾಗಿ ಹೊಲಗಳಲ್ಲಿ ನೀರು ನಿಂತಿದೆ. ನೆಲಹಾಳ್ ಭಾಗದಲ್ಲಿ ಸುರಿದಿರುವ ಮಳೆಗೆ ಒಂದೇ ರಾತ್ರಿಗೆ ಗೋಕಟ್ಟೆಗಳು ತುಂಬಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.