ಮೂಡುಬಿದಿರೆ: ಪರಿಸರದಲ್ಲಿ ಸೋಮವಾರವೂ ಭಾತಿ ಗಾಳಿ ಮಳೆ ಆಗಿದ್ದು, ಹಲವು ಮನೆಗಳ ಮೇಲೆ ಮರಗಳು ಉರುಳಿವೆ.
ಸುಮಾರು 20 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೂಡುಬಿದಿರೆ ಪಟ್ಟಣ ಸೇರಿದಂತೆ ಕೆಲವು ಗ್ರಾಮಗಳಿಗೆ ರಾತ್ರಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿತ್ತು.
ಅಲಂಗಾರು, ಚಂದ್ರಾಪುರ, ಪಳಕಳ, ಆಶ್ರಯ ಕಾಲೊನಿ ಪರಿಸರದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿ ಬಿದ್ದಿವೆ. 10ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅಲಂಗಾರ್ ಚರ್ಚ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು ಕಾರಿಗೆ ಹಾನಿಯಾಗಿದೆ. ಕಾರು ಚಾಲಕ ವಿಶುಕುಮಾರ್ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ.
ಚಂದ್ರಾಪುರದಲ್ಲಿ ನಾರಾಯಣ, ಶಾಂತಿ ರಾಡ್ರಿಗಸ್, ಸರಸ್ವತಿ ಶೆಟ್ಟಿಗಾರ್, ಜೂಲಿಯಾನ ಡಿಸೋಜ, ಆಶ್ರಯ ಕಾಲೊನಿಯಲ್ಲಿ ಸತೀಶ್ ಸಾಲ್ಯಾನ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಪಡುಕೊಣಾಜೆಯಲ್ಲಿ ಮರ ಬಿದ್ದು ಬ್ಯಾಂಕ್ಗೆ ಹಾನಿಯಾಗಿದೆ.
ಅಲಂಗಾರ್ ರಿಕ್ಷಾ ಜಂಕ್ಷನ್ನಲ್ಲಿ ದೊಡ್ಡ ಮರ ಉರುಳಿದೆ. ಅಲ್ಲಿ ಆ ಸಂದರ್ಭ ಯಾವುದೇ ವಾಹನಗಳಿರಲಿಲ್ಲ.
ಪಡುಕೊಣಾಜೆ ವ್ಯಾಪ್ತಿಯಲ್ಲಿ ರಬ್ಬರ್ ಪ್ಲಾಂಟೇಶನ್ನಲ್ಲಿ ಹಲವು ಮರಗಳು ಉರುಳಿ ಬಿದ್ದಿವೆ. ಪುರಸಭೆ ಮುಖ್ಯಾಧಿಕಾರಿ ಇಂದು ಎಂ., ವಾರ್ಡ್ ಸದಸ್ಯ ಪಿ.ಕೆ.ಥಾಮಸ್, ಕಂದಾಯ, ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.