ಮಂಗಳೂರು: ಭಾರತೀಯ ಪರಂಪರೆಯಲ್ಲಿ ಶಸ್ತ್ರ ಮತ್ತು ಶಾಸ್ತ್ರಗಳಲ್ಲಿ ಮಹಿಳೆಯರಿಗೆ ಬಹುಮುಖ್ಯ ಪಾತ್ರವಿತ್ತು ಎಂಬುದು ರಾಣಿ ಅಬ್ಬಕ್ಕರ ಹೋರಾಟ ಮತ್ತು ಅಕ್ಕಮಹಾದೇವಿ ಸಾಹಿತ್ಯದ ಮೂಲಕ ಅರಿವಿಗೆ ಬರುತ್ತದೆ ಎಂದು ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್ಎಂಎಸ್ಎಸ್) ಮಂಗಳೂರು ವಿಭಾಗ ಮತ್ತು ಕೆನರಾ ಕಾಲೇಜಿನ ಐಕ್ಯುಎಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಬುಧವಾರ ಇಲ್ಲಿ ನಡೆದ ಅಬ್ಬಕ್ಕ@ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ- ‘ಎಸಳು 75’ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ರಾಷ್ಟ್ರ ಧರ್ಮವನ್ನು ಎತ್ತಿ ಹಿಡಿದವರು. ಅವರು ಗೆರಿಲ್ಲಾ ಮಾದರಿಯ ಹೋರಾಟ ಸಂಘಟಿಸಿದವರು. ತುಳುನಾಡಿನ ಸಂಸ್ಕೃತಿ, ಪರಂಪರೆ ರಕ್ಷಣೆಗೆ ಒತ್ತು ನೀಡಿದವರು. ಆದರೆ ಅವರಿಗೆ ಸೂಕ್ತ ಮನ್ನಣೆ ಸಿಕ್ಕಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆನರಾ ಕಾಲೇಜಿನ ಸಂಚಾಲಕ ಜಗನ್ನಾಥ ಕಾಮತ್ ಮಾತನಾಡಿ, ಅಬ್ಬಕ್ಕ ಅವರಂತಹ ಹೋರಾಗಾರ್ತಿಯರ ತ್ಯಾಗ, ಹೋರಾಟ, ದೇಶಪ್ರೇಮದ ಮೌಲ್ಯಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದರು.
ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅಷ್ಟಾವಧಾನ ನಡೆಸಿಕೊಟ್ಟರು. ಕೆಆರ್ಎಂಎಸ್ಎಸ್ ಸಂಘಟನಾ ಕಾರ್ಯದರ್ಶಿ ಸಿ.ವಿ.ಮರಿದೇವರ ಮಠ, ಕೆನರಾ ಕಾಲೇಜಿನ ವ್ಯವಸ್ಥಾಪಕ ಶಿವಾನಂದ ಶೆಣೈ, ಪ್ರಾಂಶುಪಾಲೆ ಪ್ರೇಮಲತಾ ವಿ., ಆಡಳಿತಾಧಿಕಾರಿ ದೀಪ್ತಿ ನಾಯಕ್ ಉಪಸ್ಥಿತರಿದ್ದರು.
ಮಾಧವ ಎಂ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಪಿ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.