ಬಂಟ್ವಾಳ: ಜಿಲ್ಲೆಯ ಬಹುತೇಕ ಕೂಲಿ ಕಾರ್ಮಿಕರು ಕೆಂಪು ಕಲ್ಲು ಮತ್ತು ಮರಳು ಸಮಸ್ಯೆಯಿಂದ ಉದ್ಯೋಗ ಇಲ್ಲದೆ ಕಂಗೆಟ್ಟು ಮನೆಯಲ್ಲಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಪುಂಜಾಲಕಟ್ಟೆಯಲ್ಲಿ ‘ಭವತಿ ಭಿಕ್ಷಾಂ ದೇಹಿ’ ಹೆಸರಿನಲ್ಲಿ ಕಾರ್ಮಿಕರ ಪರವಾಗಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರ್ಕಾರದ ವಿರುದ್ಧ ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು. ಇದೇ ವೇಳೆ ಮಡಂತ್ಯಾರುವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಳಿಕ ಪಿಲಾತಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಉಪ ತಹಶೀಲ್ದಾರ್ ನವೀನ್ ಬೆಂಜನಪದವು ಅವರಿಗೆ ಮನವಿ ಸಲ್ಲಿಸಿದರು.
ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಮಾತನಾಡಿ, ‘ದೇಶದ ಆರ್ಥಿಕತೆಗೆ ಧಾರ್ಮಿಕ ಆಚರಣೆ ಮತ್ತು ಕೂಲಿ ಕಾರ್ಮಿಕರ ಕೊಡುಗೆಯೂ ಇದೆ ಎಂಬುದನ್ನು ಸರ್ಕಾರ ಮತ್ತು ಅಧಿಕಾರಿಗಳು ಮನಗಾಣಬೇಕು’ ಎಂದರು.
ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಉದ್ಯಮಿ ಟಿ.ಹರೀಂದ್ರ ಪೈ ಮಾತನಾಡಿದರು.
ಪ್ರಮುಖರಾದ ಜೋಯಲ್ ಮೆಂಡೋನ್ಸ, ಹರ್ಷಿಣಿ ಪುಷ್ಪಾನಂದ, ಪುರುಷೋತ್ತಮ ಶೆಟ್ಟಿ ವಾಮದಪದವು, ತಾರಾನಾಥ ಕಜೆಕಾರು, ಪಿ.ಎಂ.ಪ್ರಭಾಕರ, ಮಾಧವ ಬಂಗೇರ, ಪ್ರಶಾಂತ್ ಪುಂಜಾಲಕಟ್ಟೆ, ಹನೀಫ್ ಪುಂಜಾಲಕಟ್ಟೆ, ಹರೀಶ್ ಪ್ರಭು, ಶಾರದಾ, ಪುಷ್ಪಾನಂದ, ಅಬ್ದುಲ್ ರಹಿಮಾನ್, ನಾರಾಯಣ ಪೂಜಾರಿ, ಸುಂದರ ನಾಯ್ಕ, ರವಿಶಂಕರ ಹೊಳ್ಳ, ಶೇಖರ ಬದ್ಯಾರು, ಕಾಂತಪ್ಪ ಕರ್ಕೇರ, ದಯಾನಂದ ನಾಯ್ಕ, ಮೆಲ್ವಿನ್ ಕೊರ್ಯ, ಭವಾನಿ ಮಧ್ವ, ಬೇಬಿ, ರೇಖಾ ಶೆಟ್ಟಿ ಭಾಗವಹಿಸಿದ್ದರು.
ಬಂಟ್ವಾಳ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಬೆಳ್ತಂಗಡಿ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಪುಂಜಾಲಕಟ್ಟೆ ಪಿಎಸ್ಐ ರಾಜೇಶ್ ಕೆ.ವಿ., ಸಿಕಂದರ್ ಪಾಷಾ, ವೇಣೂರು ಪಿಎಸ್ಐ ಶ್ರೀಶೈಲಾ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.