ADVERTISEMENT

ಧಾರ್ಮಿಕ ಗ್ರಂಥಾಲಯದಿಂದ ಧರ್ಮ ಜ್ಞಾನ

ಎಡನೀರು ಮಠದ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 16:36 IST
Last Updated 12 ಅಕ್ಟೋಬರ್ 2021, 16:36 IST
ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಆರಂಭಿಸಲಾದ ಧಾರ್ಮಿಕ ಗ್ರಂಥಾಲಯವನ್ನು ಎಡನೀರು ಮಠದ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಆರಂಭಿಸಲಾದ ಧಾರ್ಮಿಕ ಗ್ರಂಥಾಲಯವನ್ನು ಎಡನೀರು ಮಠದ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ ಉದ್ಘಾಟಿಸಿದರು.   

ಪುತ್ತೂರು: ‘ನಮ್ಮ ಶಾಲೆಗಳಲ್ಲಿ ಧಾರ್ಮಿಕ ಶಿಕ್ಷಣ ನಿರೀಕ್ಷೆ ಮಾಡುವುದು ಕಷ್ಟ. ಇಂಥ ಸಂದರ್ಭದಲ್ಲಿ ದೇವಸ್ಥಾನಗಳಂಥ ಕೇಂದ್ರದಲ್ಲಿ ಧಾರ್ಮಿಕ ಗ್ರಂಥಾಲಯದ ಮೂಲಕ ಧರ್ಮ ಜ್ಞಾನ ನೀಡುವುದು ಉತ್ತಮ ಸಂಗತಿ. ದೇಶದ ಧಾರ್ಮಿಕ ಕೇಂದ್ರಗಳ ಪೈಕಿ ಇದು ಪ್ರಥಮ ಪ್ರಯೋಗ’ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ಮಹಾಲಿಂಗೇಶ್ವರ ದೇವಳದ ವತಿಯಿಂದ ಆರಂಭಿಸಿರುವ ಗ್ರಂಥಾಲಯವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಇತರ ಧರ್ಮಗಳ ಧಾರ್ಮಿಕ ಕೇಂದ್ರಗಳು ಜತೆಯಲ್ಲೇ ಧಾರ್ಮಿಕ ಶಿಕ್ಷಣ ನೀಡುತ್ತವೆ. ನಮ್ಮ ಧರ್ಮದಲ್ಲಿ ಇಂಥ ವ್ಯವಸ್ಥೆ ಇಲ್ಲ. ಇದರಿಂದಾಗಿ ನಮ್ಮ ಧರ್ಮದ ಸಾರ ಏನು ಎಂಬುದು ಇಂದಿನ ಪೀಳಿಗೆಗೆ ತಿಳಿದಿಲ್ಲ. ಪುತ್ತೂರು ದೇಗುಲದಲ್ಲಿ ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ಗ್ರಂಥಾಲಯ ಎರಡೂ ಆರಂಭಿಸಿರುವುದು ಅಗತ್ಯವಾದ ವ್ಯವಸ್ಥೆ’ ಎಂದರು.

ನಿವೃತ್ತ ಪ್ರಾಧ್ಯಾಪಕ ಸಾಹಿತಿ ವಿ.ಬಿ. ಅರ್ತಿಕಜೆ ಮಾತನಾಡಿ, ‘ಮನುಷ್ಯನನ್ನು ಎತ್ತರಿಸುವುದು ಧರ್ಮ ಎಂದರ್ಥ. ಧರ್ಮವೆಂದ ಮಾತ್ರಕ್ಕೆ ಅದು ಮತವಲ್ಲ. ಮತಗಳು ನಮ್ಮ ವೈಯಕ್ತಿಕ ನೆಲೆಗಟ್ಟಿನಲ್ಲಿ ಕಾಣಿಸಿಕೊಳ್ಳುವಂಥದ್ದು. ಧರ್ಮಕ್ಕೆ ಸಮಷ್ಟಿಯ ಸಾರ್ವಕಾಲಿಕ ಅರ್ಥವಿದೆ. ಧರ್ಮದಲ್ಲಿ ಕೂಡ ಅನೇಕ ವಿಧಾನಗಳಿವೆ. ನಿತ್ಯಧರ್ಮ, ನೈಮಿತ್ತಿಕ ಧರ್ಮ, ಸ್ವಧರ್ಮ, ವೃತ್ತಿಧರ್ಮ, ಆಶ್ರಮ ಧರ್ಮ, ಕಾಲ ಧರ್ಮ ಮತ್ತು ಸ್ಥಾನ ಧರ್ಮ ಎಂದು ಅವುಗಳನ್ನು ವಿಂಗಡಿಸಲಾಗಿದೆ. ಇವುಗಳ ಸಾರವನ್ನು ಅರ್ಥ ಮಾಡಿಕೊಳ್ಳಲು ಧಾರ್ಮಿಕ ಗ್ರಂಥಾಲಯ ಪೂರಕ’ ಎಂದರು.

ADVERTISEMENT

ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮುಳಿಯ ಕೇಶವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿ.ಎಸ್. ಭಟ್, ಶೇಖರ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ ಇದ್ದರು. ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.