ಪುತ್ತೂರು: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಾಸ್ಯಂತ ಶೇಕಡ 60ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಗೆಲುವು ಸಾಧಿಸಲಿದೆ . ಇದರ ಫಲಿತಾಂಶ ಲೋಕಸಭೆಯ ಚುನಾವಣೆಗೆ ದಿಕ್ಸೂಚಿಯಾಗಲಿದೆ’ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.
ಪುತ್ತೂರು ನಗರಸಭಾ ಚುನಾವಣೆಯಲ್ಲಿ ಹಾರಾಡಿ ಶಾಲಾ 15ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪುತ್ತೂರು ನಗರಸಭೆಯಲ್ಲಿ ಈಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ. 8 ವರ್ಷಗಳಿಂದ ಸ್ಥಳೀಯ ಆಡಳಿತ ವ್ಯವಸ್ಥೆ ಅಸ್ಥಿರ ಗೊಂಡಿದ್ದು, ಇಲ್ಲಿನ ಜನತೆಯ ಕೋಪಕ್ಕೆ ಕಾಂಗ್ರೆಸ್ ಗುರಿಯಾಗಿದೆ. ಬಿಜೆಪಿ 23ಕ್ಕಿಂತಲೂ ಹೆಚ್ಚು ಸ್ಥಾನ ಪಡೆಯಲಿದೆ.
ಆಶ್ವಾಸನೆಯಲ್ಲೇ 100 ದಿನ: ರಾಜ್ಯದ 100ದಿನಗಳ ಆಡಳಿತ ಕೇವಲ ಘೋಷಣೆ ಮತ್ತು ಆಶ್ವಾಸನೆಗಳಲ್ಲಿಯೇ ಮುಗಿದಿದೆ. ರಾಜ್ಯದಲ್ಲಿ ಇಷ್ಟೊಂದು 'ಅಸ್ಥಿರತೆ' ಇದ್ದ ಸರ್ಕಾರ ಇದುವರೆಗೆ ಬಂದಿಲ್ಲ. ರಾಜ್ಯವನ್ನು ಕುಲಗೆಡಿಸಿದ ಆಡಳಿತವನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಜನತೆಗೆ ನೀಡಿದ್ದಾರೆ.ರಾಜ್ಯದ ಗ್ರಾಮೀಣ ಭಾಗದ ಕೂಲಿ ಕಾರ್ಮಿಕನಿಂದ ಹಿಡಿದು ನಗರದಲ್ಲಿ ವಾಸಿಸುವ ವ್ಯಕ್ತಿಗಳ ವರೆಗೆ ಈ ಆಡಳಿತ ಬೇಡ ಎಂಬ ಭಾವನೆ ಉಂಟಾಗಿದೆ. ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇದನ್ನು ಸಾಬೀತು ಪಡಿಸಲಿದೆ ಎಂದು ಸದಾನಂದ ಗೌಡ ಅವರು ಹೇಳಿದರು.
ಬೇಗ ಮುಗಿಸಿ: ಶಿರಾಡಿ ಘಾಟ್ ರಸ್ತೆಯನ್ನು 6 ತಿಂಗಳು ಮತ್ತೆ ಬಂದ್ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ ಎಂದ ಅವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ರಾಜ್ಯದಿಂದ ಪ್ರತ್ಯೇಕ ಮಾಡುವ ಯೋಚನೆ ಮಾಡುತ್ತಿದ್ದೀರಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು. ಲೋಕೋಪಯೋಗಿ ಇಲಾಖೆಯ ಸಚಿವ ರೇವಣ್ಣ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮಾತನಾಡಿದ್ದೇನೆ. ಕಾಮಗಾರಿಗೆ ವೇಗ ತೆಗೆದುಕೊಂಡು ಮಾಡಿ. ಇಲ್ಲದಿದ್ದರೆ ಜನರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.